ಉಪ್ಪಳ: ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಡ್ರಗ್ಸ್ ಮುಕ್ತ ಸಮಾಜ ನಿರ್ಮಿಸುವ ಅಂತರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಮುಳಿಂಜ ಜಿ.ಎಲ್.ಪಿ ಶಾಲೆಯಲ್ಲಿ ಶಾಲಾ ಪಿ.ಟಿ.ಎ ಉಪಾಧ್ಯಕ್ಷ ಇಂತಿಯಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಆರೋಗ್ಯಕರ ಮತ್ತು ಸದೃಢ ಸಮಾಜ ನಿರ್ಮಿಸಲು ಮಾದಕ ವಸ್ತುಗಳ ಬೇರುಗಳನ್ನು ಕಿತ್ತೊಗೆಯುವುದು ಅತ್ಯಗತ್ಯ ಮಾದಕ ವಸ್ತುಗಳಿಗೆ ಮುಕ್ತಾಯ ಆರೋಗ್ಯಕರ ಸಮಾಜಕ್ಕೆ ಆರಂಭ ಎಂಬುದು ಪ್ರತಿಯೊಬ್ಬರ ಧ್ಯೇಯ ಆಗಬೇಕೆಂದು ತಿಳಿಸಿ ಮಂಜೇಶ್ವರ ಬಿ.ಆರ್.ಸಿಯ ಸಂಯೋಜಕ ರಾಜಗೋಪಾಲ ಅವರು ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಸಂಕಲ್ಪ ಅಭಿಯಾನ ಸಹಿ ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಜೇಶ್ವರ ಸೀನಿಯರ್ ಸಿವಿಲ್ ಪೋಲೀಸ್ ಮಧು ಕಡಕಾವತ್ ಅವರು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ತರಗತಿ ನಡೆಸಿದರು. ಪೋಷಕರು ತಮ್ಮ ಮಕ್ಕಳ ನಡವಳಿಕೆಯ ಮೇಲೆ ನಿಗಾ ಇರಿಸುವ ಮೂಲಕ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕು ಅವರಲ್ಲಿ ಪ್ರೀತಿ ಪ್ರೇಮ ತೋರಿಸಿ ಮುಕ್ತವಾಗಿ ಮಾತನಾಡಿಸುತ್ತಾ ಅವರ ಒಡನಾಟ ಅವರ ಪರಿಸರ ತಿಳಿಯುವುದರ ಜೊತೆಗೆ ನಾವೆಂದಿಗೂ ಅನಾಥರಲ್ಲ ನಮ್ಮೊಂದಿಗೆ ಹೆತ್ತವರು ಸಮಾಜ ಬೆಂಬಲವಾಗಿದೆ ಎಂಬ ಮನೋಭಾವ ಬೆಳೆಸಿ ಅವರನ್ನು ಮಾನಸಿಕವಾಗಿ ಬಲಿಷ್ಠರಾಗಿರಬೇಕೆಂಬ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ಪೋಲೀಸ್ ಠಾಣೆಯ ಸಜೆಷ್ ಮತ್ತು ವಿಜಯನ್, ಶಾಲಾ ಶಿಕ್ಷಕಿಯರಾದ ಧನ್ಯ ಹಾಗೂ ಜಸೀಲ, ಹೆತ್ತವರು ಹಾಗೂ ಮಂಜೇಶ್ವರ ಬಿ.ಆರ್.ಸಿ ಯ ಅಧ್ಯಾಪಕರು ಭಾಗವಹಿಸಿದ್ದರು. ಮಕ್ಕಳ ಜೊತೆಗೆ ಘೋಷಣಾ ವಾಕ್ಯಗಳನ್ನು ಕೂಗಿ ಪ್ಲಕಾರ್ಡ್ ಹಿಡಿದು ಮೆರವಣಿಗೆಯನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮುಳಿಂಜ ವಾಣಿ ಎಂಬ ತರಗತಿ ಮಾಸಪತ್ರಿಕೆಯನ್ನು ಮಧು ಕಡಕಾವತ್ ಬಿಡುಗಡೆಗೊಳಿಸಿದರು. ಇದರ ಭಾಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪೋಸ್ಟರ್ ರಚನೆ, ಚಿತ್ರರಚನೆ ,ಕ್ವಿಜ್ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಯಿತು. ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಶಿಕ್ಷಕಿ ರೇಷ್ಮಾ ವಂದಿಸಿದರು. ಶಿಕ್ಷಕಿ ಆಯಿಷತ್ ಸೈನಾಝ ನಿರೂಪಿಸಿದರು.

.jpg)
.jpg)
