ನವದೆಹಲಿ: ಕಳೆದ ವಾರ ಪ್ರತ್ಯೇಕ ದಾಳಿಗಳಲ್ಲಿ ಐದು ಭಾರತೀಯ ನಾವಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಕಪ್ಪು ಸಮುದ್ರ ಸೇರಿದಂತೆ ಸಂಘರ್ಷ ನಡೆಯುತ್ತಿರುವ ಸಮುದ್ರ ಪ್ರದೇಶಗಳಲ್ಲಿ ಸಂಚರಿಸುವ ಸರಕು ಸಾಗಣೆ ಹಡಗುಗಳಲ್ಲಿ ಉದ್ಯೋಗಕ್ಕೆ ಸೇರುವ ಮುನ್ನ ಅಲ್ಲಿನ ಭದ್ರತಾ ಅಪಾಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವಂತೆ ವಿದೇಶಾಂಗ ಸಚಿವಾಲಯ (MEA) ರವಿವಾರ ಭಾರತೀಯರಿಗೆ ಸಲಹೆ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಕಪ್ಪು ಸಮುದ್ರ ಮತ್ತು ಅದರ ಸುತ್ತಮುತ್ತಲಿನ ಸಮುದ್ರ ಪ್ರದೇಶಗಳಲ್ಲಿನ ಭದ್ರತಾ ಪರಿಸ್ಥಿತಿ ಅತ್ಯಂತ ಅಸ್ಥಿರವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಪ್ರದೇಶಗಳಲ್ಲಿ ಸಂಚರಿಸುವ ಸರಕು ಸಾಗಣೆ ಹಡಗುಗಳು ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ನಿರಂತರ ಅಪಾಯವನ್ನು ಎದುರಿಸುತ್ತಿವೆ. ಎಪ್ರಿಲ್ ನಿಂದ ಇಂತಹ ದಾಳಿಗಳ ಸಂಖ್ಯೆ ಹೆಚ್ಚಾಗಿದ್ದು, ಇದೇ ಅವಧಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಐದು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ.
ಆದ್ದರಿಂದ, ಈ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸರಕು ಸಾಗಣೆ ಹಡಗುಗಳಲ್ಲಿ ಉದ್ಯೋಗಕ್ಕೆ ತೆರಳಲು ಉದ್ದೇಶಿಸಿರುವವರು ಅಂತಹ ಉದ್ಯೋಗ ಸ್ವೀಕರಿಸುವ ಮುನ್ನ ಅಲ್ಲಿನ ಭದ್ರತಾ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಅಪಾಯದ ಮಟ್ಟವನ್ನು ಅಂದಾಜಿಸಬೇಕು ಎಂದು ಸಚಿವಾಲಯ ಸಲಹೆ ನೀಡಿದೆ.
ಉದ್ಯೋಗದಾತರು, ನೇಮಕಾತಿ ಸಂಸ್ಥೆಗಳು ಹಾಗೂ ಹಡಗು ನಿರ್ವಾಹಕರಿಂದ ಹಡಗು ಸಾಗಲಿರುವ ಮಾರ್ಗ, ತಲುಪಲಿರುವ ಬಂದರುಗಳು, ಭದ್ರತಾ ವ್ಯವಸ್ಥೆಗಳು, ವಿಮಾ ಸೌಲಭ್ಯಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯಬೇಕು ಎಂದು ಅದು ಸೂಚಿಸಿದೆ.
ಉದ್ಯೋಗದ ಷರತ್ತುಗಳು ಅನ್ವಯವಾಗುವ ಅಂತರರಾಷ್ಟ್ರೀಯ ಸಮುದ್ರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರಬೇಕು. ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ, ಸ್ಥಳಾಂತರ, ಭಾರತಕ್ಕೆ ಮರಳಿಸುವ ವ್ಯವಸ್ಥೆ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ಸಮರ್ಪಕ ನಿಬಂಧನೆಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.
ಭಾರತೀಯರು ತಮ್ಮ ಪ್ರಯಾಣದ ವಿವರಗಳನ್ನು ಕುಟುಂಬ ಸದಸ್ಯರಿಗೆ ಮುಂಚಿತವಾಗಿ ತಿಳಿಸಬೇಕು. ಸಮುದ್ರದಲ್ಲಿರುವ ಅವಧಿಯಲ್ಲಿ ಅವರೊಂದಿಗೆ ನಿಯಮಿತ ಸಂಪರ್ಕದಲ್ಲಿರಬೇಕು ಎಂದು ಸಚಿವಾಲಯ ಸಲಹೆ ನೀಡಿದೆ.
ಈ ಪ್ರದೇಶದಲ್ಲಿ ಭಾರತೀಯರಿಗೆ ದೂತಾವಾಸದ ನೆರವು ಅಗತ್ಯವಾದರೆ, ಸಂಬಂಧಿತ ದೇಶದಲ್ಲಿರುವ ಭಾರತದ ರಾಯಭಾರ ಕಚೇರಿ ಅಥವಾ ದೂತಾವಾಸವನ್ನು ಸಂಪರ್ಕಿಸುವಂತೆ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ.

