ಲಖನೌ: ಪದವಿ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉಚಿತವಾಗಿ ದ್ವಿಚಕ್ರವಾಹನಗಳನ್ನು ನೀಡುವ 'ರಾಣಿ ಲಕ್ಷ್ಮೀಬಾಯಿ ಸ್ಕೂಟಿ ಯೋಜನೆ'ಯನ್ನು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಘೋಷಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
2027ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಯುವ ಮತದಾರರ ಸೆಳೆಯಲು ಸರ್ಕಾರ ಜನಪ್ರಿಯ ಕಾರ್ಯಕ್ರಮಗಳ ಮೊರೆ ಹೋಗಿದೆ.
ಉನ್ನತ ಶಿಕ್ಷಣಕ್ಕೆ ಹೆಣ್ಣು ಮಕ್ಕಳನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ವರ್ಷ 50,000 ವಿದ್ಯಾರ್ಥಿನಿಯರಿಗೆ ಸ್ಕೂಟಿಗಳನ್ನು ನೀಡಲಾಗುವುದು ಎಂದು ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು ಸಂಪುಟ ಸಭೆ ನಂತರ ಪತ್ರಕರ್ತರಿಗೆ ತಿಳಿಸಿದರು.
₹12 ಲಕ್ಷದೊಳಗಿನ ವಾರ್ಷಿಕ ವರಮಾನ ಮತ್ತು ಚಾಲನಾ ಪರವಾನಗಿ ಕಡ್ಡಾಯಗೊಳಿಸಲಾಗಿದೆ. ಹುತಾತ್ಮರ ಕುಟುಂಬ, ನಿರ್ಗತಿಕರು ಮತ್ತು ಅಂಗವಿಕಲರ ಕುಟುಂಬಗಳ ಹೆಣ್ಣು ಮಕ್ಕಳಿಗೆ ಮೆರಿಟ್ ಪ್ರಮಾಣ ಪತ್ರದ ಅಗತ್ಯವಿಲ್ಲ. ನೋಂದಣಿ ಶುಲ್ಕ, ವಾಹನ ವಿಮೆಯನ್ನು ಸರ್ಕಾರವೇ ಭರಿಸಲಿದೆ. ಹೆಲ್ಮೆಟ್, ಐದು ಲೀಟರ್ ಪೆಟ್ರೋಲ್ ಅನ್ನು ಸ್ಕೂಟಿ ಜೊತೆಗೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

