ಕಾಸರಗೋಡು: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ದೇಗುಲ ನಿರ್ಮಾಣ ಕಾರ್ಯ ಕೈಗೊಳ್ಳುವ ಮೂಲಕ ಹಿಂದೂಸಮಾಜ ತನ್ನ ಶಕ್ತಿ ಪ್ರಕಟಪಡಿಸುವಲ್ಲಿ ಯಶಸ್ವಿಯಾಗಿರುವುದಾಗಿ ವಿ.ಎಚ್.ಪಿ ಕಣ್ಣೂರು ವಿಭಾಗದ ಪ್ರಮುಖ್ ಸಂಕಪ್ಪ ಭಂಡಾರಿ ತಿಳಿಸಿದ್ದಾರೆ. ಅವರು ಕಾಸರಗೋಡು ಕೋಟೆಕಣಿ ಶ್ರೀರಾಮನಾಥ ಭವನದಲ್ಲಿ ಆಯೋಜಿಸಲಾಗಿದ್ದ ವಿ.ಎಚ್.ಪಿ ಕಾಸರಗೋಡು ಪ್ರಖಂಡ ವಾರ್ಷಿಕ ಬೈಠಕ್ ಮತ್ತು ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದರು. ವಿಶ್ವಗುರುವಾಗಿ ಬೆಳೆಯುತ್ತಿರುವ ಭಾರತ ದೇಶದ ಭವ್ಯ ಪರಂಪರೆಯನ್ನು ಎತ್ತಿಹಿಡಿಯುವ ಕೆಸಲ ಸಮಸ್ತ ಹಿಂದೂಗಳಿಂದ ನಡೆಯಬೇಕಾಗಿದೆ ಎಂದು ತಿಳಿಸಿದರು.
ವಿ.ಎಚ್.ಪಿ ಕಾಸರಗೋಡು ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. ವಿ.ಎಚ್.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶಿವರಾಮ ಭಟ್, ಮಾತೃಶಕ್ತಿ ಜಿಲ್ಲಾದ್ಯಕ್ಷೆ ಪದ್ಮಾಮೋಹನ್ದಾಸ್, ರಾಮಕೃಷ್ಣ ಹೊಳ್ಳ , ಕಾಸರಗೋಡು ಪ್ರಖಂಡ ಕಾರ್ಯದರ್ಶಿ ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಹಿರಿಯ ಕಾರ್ಯಕರ್ತ ಲಕ್ಷ್ಮೀಕಾಂತ್ ನೆಲ್ಲಿಕುಂಜೆ, ಮಾತೃಸಮಿತಿಯ ಶ್ರೀಲತಾ ಟೀಚರ್, ಡಾ. ಗಣೇಶ್ ಚೌಕಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವಸಂತ ಕೆರೆಮನೆ ವರದಿ ವಾಚಿಸಿದರು. ಉಪಾಧ್ಯಕ್ಷ ಗಣಪತಿ ಅಮೈ ಸ್ವಾಗತಿಸಿದರು. ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಸಂತ ಕೆರೆಮನೆ ವಂದಿಸಿದರು.



