ಅಹಮದಾಬಾದ್ : ಇಲ್ಲಿಯ ರಾಮೋಲ್ ಪ್ರದೇಶದಲ್ಲಿ ಅಕ್ರಮವಾಗಿ ಪಟಾಕಿ ತಯಾರಿಕೆ ಘಟಕ ನಡೆಸುತ್ತಿದ್ದ ಆರೋಪದಲ್ಲಿ ಮೂವರು ಪಾಲುದಾರರನ್ನು ಬಂಧಿಸಲಾಗಿದೆ. ಶನಿವಾರ ಅಪರಾಹ್ನ ಈ ಘಟಕದಲ್ಲಿ ಸಂಭವಿಸಿದ ಸ್ಫೋಟ ಮತ್ತು ಅಗ್ನಿ ದುರಂತದಲ್ಲಿ 9 ಜನರು ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಈ ಘಟಕದ ಪರವಾನಗಿ ಅವಧಿ ಮುಗಿದಿದ್ದು,ಅದನ್ನು ನವೀಕರಿಸದ ಕಾರಣ ಘಟಕವನ್ನು ಮುಚ್ಚುವಂತೆ ಆದೇಶಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇತ್ತೀಚಿನ ರಥಯಾತ್ರೆಯ ಭದ್ರತಾ ವ್ಯವಸ್ಥೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿರತರಾಗಿದ್ದ ಸಮಯವನ್ನು ಬಳಸಿಕೊಂಡ ಆರೋಪಿಗಳು ಸುಮಾರು 20 ದಿನಗಳ ಹಿಂದೆ ದಾಹೋಡ್ನಿಂದ ಕಾರ್ಮಿಕರನ್ನು ಕರೆತಂದು ಅಕ್ರಮವಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದರು. ಈ ಅಕ್ರಮಕ್ಕೆ ಜಾಗವನ್ನು ಗುತ್ತಿಗೆಗೆ ನೀಡಿದ ಭೂಮಾಲಿಕ ಮತ್ತು ಇದರ ಹಿಂದಿರುವ ಹಣಕಾಸುದಾರರ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳನ್ನು ರಮಿಲಾಬೆನ್ ದೋಡಿಯಾ, ಆಕೆಯ ಪುತ್ರ ಮೇಹುಲ್ ದೋಡಿಯಾ ಮತ್ತು ಅವರ ವ್ಯಾಪಾರ ಪಾಲುದಾರ ಸಾದಿಕ್ ಸೈಯದ್ ಎಂದು ಗುರುತಿಸಲಾಗಿದೆ.

