ನವದೆಹಲಿ: ಸಂಘರ್ಷ ಸಂಬಂಧಿತ ಲೈಂಗಿಕ ಹಿಂಸೆಯನ್ನು ವಿಶ್ವಸಂಸ್ಥೆಯಲ್ಲಿ ಭಾರತವು ಬಲವಾಗಿ ಖಂಡಿಸಿದೆ. ಲೈಂಗಿಕ ಹಿಂಸೆಯನ್ನು ಯುದ್ಧ, ಭಯೋತ್ಪಾದನೆ, ಚಿತ್ರಹಿಂಸೆ ಮತ್ತು ರಾಜಕೀಯ ದಮನಕ್ಕೆ ಸಮುದಾಯಗಳನ್ನು ನಿಗ್ರಹಿಸಲು ಸಾಧನವಾಗಿ ಬಳಸಲಾಗುತ್ತಿದೆ ಎಂದು ವಿವರಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಂಘರ್ಷ ಸಂಬಂಧಿತ ಲೈಂಗಿಕ ಹಿಂಸೆ(ಸಿಆರ್ಎಸ್ವಿ) ಕುರಿತಾದ ಮುಕ್ತ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪಿ. ಹರೀಶ್, 2025ರಲ್ಲಿ ಲೈಂಗಿಕ ಹಿಂಸೆ ಪ್ರಕರಣಗಳಲ್ಲಿ ತೀವ್ರ ಹೆಚ್ಚಳವನ್ನು ಸೂಚಿಸುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ವರದಿಯು ಸಾಮೂಹಿಕ ಕ್ರಮದ ತುರ್ತು ಅಗತ್ಯವನ್ನು ಒತ್ತಿ ಹೇಳುತ್ತದೆ ಎಂದು ಹೇಳಿದ್ದಾರೆ.
'2025ರಲ್ಲಿ ವಿಶ್ವದಲ್ಲಿ ಲೈಂಗಿಕ ಹಿಂಸೆಯ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ , ಕ್ರೌರ್ಯವನ್ನು ದೃಢೀಕರಿಸುವ ಸಂಘರ್ಷ ಸಂಬಂಧಿತ ಲೈಂಗಿಕ ಹಿಂಸಾಚಾರದ ಕುರಿತಾದ ಯುಎನ್ಎಸ್ಸಿ ಸಂಶೋಧನಾ ವರದಿ ಹಿನ್ನೆಲೆಯಲ್ಲಿ ಇಂದಿನ ಮುಕ್ತ ಚರ್ಚೆಯಲ್ಲಿ ಸದಸ್ಯ ರಾಷ್ಟ್ರಗಳ ಸಾಮೂಹಿಕ ಚರ್ಚೆಗೆ ಇದು ಅರ್ಹ ವಿಷಯವಾಗಿದೆ.. ಸಮುದಾಯಗಳನ್ನು ವಶಕ್ಕೆ ಪಡೆಯಲು, ಭಿನ್ನಾಭಿಪ್ರಾಯ ನಿಗ್ರಹಿಸುವ ಉದ್ದೇಶದಿಂದ ಲೈಂಗಿಕ ಹಿಂಸಾಚಾರವನ್ನು ಯುದ್ಧ, ಭಯೋತ್ಪಾದನೆ, ಚಿತ್ರಹಿಂಸೆ ಮತ್ತು ರಾಜಕೀಯ ದಮನಕ್ಕಾಗಿ ಸಾಧನವಾಗಿ ಬಳಸಲಾಗುತ್ತಿದೆ. ಇಂತಹ ಘೋರ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ'ಎಂದು ರಾಯಭಾರಿ ಹರೀಶ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಶಾಂತಿಪಾಲನೆಗೆ ಭಾರತದ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಮಹಿಳಾ ಶಾಂತಿಪಾಲಕರ ನಿಯೋಜನೆಯು ಸಂಘರ್ಷ ಸಂಬಂಧಿತ ಲೈಂಗಿಕ ಹಿಂಸೆ ತಡೆಯುವಲ್ಲಿ ಪರಿವರ್ತನಾತ್ಮಕ ಪರಿಣಾಮ ಬೀರಿದೆ ಎಂದಿದ್ದಾರೆ.
2007ರಲ್ಲಿ ಭಾರತವು ಲೈಬೀರಿಯಾಕ್ಕೆ ನಿಯೋಜಿಸಿದ ಮೊದಲ ಮಹಿಳಾ ಪೊಲೀಸ್ ಘಟಕವು ಅಪರಾಧ ನಿಗ್ರಹಿಸಲು, ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರವನ್ನು ತಡೆಯಲು ಹಾಗೂ ಜನರಲ್ಲಿ ಸುರಕ್ಷತೆ ಮತ್ತು ವಿಶ್ವಾಸವನ್ನು ಪುನರ್ನಿರ್ಮಿಸಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಮಹಿಳಾ ಶಾಂತಿಪಾಲಕರು ತಂದ ವಿಶಿಷ್ಟ ದೃಷ್ಟಿಕೋನವು ಲೈಂಗಿಕ ಹಿಂಸೆ ತಡೆಯಲು ವ್ಯವಸ್ಥೆಯನ್ನು ಬಲಪಡಿಸಿದೆ ಎಂದು ಭಾರತೀಯ ರಾಯಭಾರಿ ಹೇಳಿದ್ದಾರೆ.

