ಟೆಹ್ರಾನ್: ಇರಾನ್ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆ ಟೆಹ್ರಾನ್ನಲ್ಲಿ ನಡೆಯುತ್ತಿದ್ದು, ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಅವರು ಸಾವನ್ನಪ್ಪಿದ ಸುಮಾರು ನಾಲ್ಕು ತಿಂಗಳ ನಂತರ, ಜುಲೈ 9ರಂದು ಅವರನ್ನು ಸಮಾಧಿ ಮಾಡಲಾಗುವುದು.
ಇರಾನ್ ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ ಖಮೇನಿ ಮೃತದೇಹ ಸಂರಕ್ಷಣೆ ಮಾಡಿತ್ತು.
ಇರಾನ್ ಸರ್ಕಾರದ ಆಹ್ವಾನದ ಮೇರೆಗೆ ಭಾರತದ ಅಧಿಕೃತ ನಿಯೋಗವು ಈಗಾಗಲೇ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಅಂತಿಮ ನಮನ ಸಲ್ಲಿದೆ. ಈ ನಿಯೋಗದಲ್ಲಿ ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೇನ್ ಮತ್ತು ದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಪಬಿತ್ರ ಮಾರ್ಗೆರಿಟಾ ಭಾಗವಹಿಸಿದ್ದರು.
ಅದೇ ರೀತಿ ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್, ಸಂಸದ ಪವನ್ ಖೇರಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಜಮ್ಮು ಮತ್ತು ಕಾಶ್ಮೀರದ 'ಅಂಜುಮನ್-ಎ-ಶರಿಯೆ ಶಿಯಾನ್'ನ ಅಧ್ಯಕ್ಷ ಆಘಾ ಸೈಯದ್ ಹಸನ್ ಮೊಸವಿ ಅಲ್ ಸಫವಿ ಅವರನ್ನೊಳಗೊಂಡ ಪ್ರತ್ಯೇಕ ನಿಯೋಗ ಹಾಗೂ ಭಾರತದ ವಿವಿಧ ಧಾರ್ಮಿಕ ಮುಖಂಡರು ಕೂಡ ಖಮೇನಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಗಮನ ಸೆಳೆದ ಪ್ರಯಾಗರಾಜ್ ಪಂಡಿತ:
ಈ ಮಧ್ಯೆ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಪಂಡಿತ್ ವಿಜಯ್ ಕುಮಾರ್ ಶರ್ಮಾ ಕೂಡ ಭಾಗಿಯಾಗಿದ್ದು, ಇವರು ಖಮೇನಿ ಮತ್ತು ಇರಾನ್ನ ಕಟ್ಟಾ ಬೆಂಬಲಿಗರು ಹಾಗೂ ಅಮೆರಿಕ ಮತ್ತು ಅದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ
ಕಟ್ಟಾ ವಿರೋಧಿಗಳಾಗಿರುವುದು ಗಮನ ಸೆಳೆದಿದೆ.
ಪಂಡಿತ್ ಕುಮಾರ್ ಶರ್ಮಾ ಅವರು ಈ ಹಿಂದೆ ಅಂತಾರಾಷ್ಟ್ರೀಯ ಕುದ್ಸ್ ದಿನದ ಅಂಗವಾಗಿ ಮಾಡಿದ ಭಾಷಣ ಈಗ ಸಾಮಾಕಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಭಾಷಣದಲ್ಲಿ ಪಂಡಿತ್ ಶರ್ಮಾ ಅವರು ಅಮೆರಿಕವನ್ನು ತೀವ್ರವಾಗಿ ಟೀಕಿಸಿದ್ದಾರಲ್ಲದೇ, ಆಯತೊಲ್ಲಾ ಅಲಿ ಖಮೇನಿ ಅವರನ್ನು "ಶೇರ್-ಎ-ದಿಲ್"ಎಂದು ಕರೆದಿದ್ದಾರೆ.
"ಅಮೆರಿಕಕ್ಕೆ ಅದರ ಜಾಗತಿಕ ಸ್ಥಾನ ತೋರಿಸಿದ ಇರಾನ್, ಅಭಿನಂದನೆ ಅರ್ಹ" ಎಂದು ಪಂಡಿತ್ ವಿಜಯ್ ಕುಮಾರ್ ಶರ್ಮಾ ತಮ್ಮ ಭಾಷಣದಲ್ಲಿ ಹೇಳಿದ್ದರು. ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ಸಮತೋಲಿತ ನಿಲುವು ಒಂದು ಕಡೆಯಾದರೆ, ಪಂಡಿತ್ ವಿಜಯ್ ಕುಮಾರ್ ಶರ್ಮಾ ಅವರು ಇರಾನ್ ಪರವಾಗಿ ಮತ್ತು ಅಮೆರಿಕ ವಿರುದ್ಧವಾಗಿ ಬಹಿರಂಗವಾಗಿಯೇ ತಮ್ಮ ನಿಲುವು ಪ್ರದರ್ಶಿಸಿದ್ದಾರೆ.
ಯಾರು ಪಂಡಿತ್ ಶರ್ಮಾ?
ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಭಾರತೀಯ ಧಾರ್ಮಿಕ ಭಾಷಣಕಾರ ಮತ್ತು ವಿದ್ವಾಂಸರಾಗಿರುವ ಪಂಡಿತ್ ವಿಜಯ್ ಕುಮಾರ್ ಶರ್ಮಾ,ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ನ ಪ್ರತಿರೋಧವನ್ನು ಶ್ಲಾಘಿಸುವ ಭಾಷಣಗಳಿಂದಾಗಿ ಗಮನ ಸೆಳೆದಿದ್ದಾರೆ. "ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಅಮೆರಿಕವನ್ನು ಸಂಪೂರ್ಣವಾಗಿ ಮಂಡಿಯೂರುವಂತೆ ಮಾಡಿರುವ ಇರಾನ್, ಈ ಜಗತ್ತಿನ ಅತ್ಯಂತ ಧೈರ್ಯಶಾಲಿ ದೇಶ" ಎಂದು ಪಂಡಿತ್ ವಿಜಯ್ ಕುಮಾರ್ ಶರ್ಮಾ ಕೊಂಡಾಡಿದ್ದಾರೆ.
ಅಂತರಧರ್ಮೀಯ ಒಗ್ಗಟ್ಟು ಮತ್ತು ದಬ್ಬಾಳಿಕೆ-ವಿರೋಧಿ ಸಂದೇಶವನ್ನು ಒತ್ತಿ ಹೇಳುವ ಪಂಡಿತ್ ವಿಜಯ್ ಕುಮಾರ್ ಶರ್ಮಾ, ಅಮೆರಿಕವನ್ನು "ಜಗತ್ತಿನ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಮತ್ತು ಅತ್ಯಂತ ಕ್ರೂರ ದೇಶ. ಮಧ್ಯಪ್ರಾಚ್ಯದಲ್ಲಿ ಇರಾನ್ ಅಮೆರಿಕದ ಅಹಂಕಾರವನ್ನು ಇರಾನ್ ಮಣ್ಣು ಮಾಡಿದೆ" ಎಂದು ಪ್ರತಿಪಾದಿಸುತ್ತಾರೆ. ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಇರಾನ್ ಆಹ್ವಾನ ನೀಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
"ಮಧ್ಯಪ್ರಾಚ್ಯದಲ್ಲಿ ಇರಾನ್ ಸಂಪೂರ್ಣವಾಗಿ ಅಮೆರಿಕವನ್ನು ಮಂಡಿಯೂರಿಸಿದೆ. ಇರಾನಿಯನ್ನರ ಧೈರ್ಯವನ್ನು ಇಡೀ ಜಗತ್ತು ಮೆಚ್ಚಬೇಕು. "ಹುಸೇನಿಯತ್ ಎಂದರೆ ತುಳಿತಕ್ಕೊಳಗಾದವರ ಜೊತೆ ನಿಲ್ಲುವುದು ಮತ್ತು ಅಯತೊಲ್ಲಾ ಖಮೇನಿ ಯಾವಾಗಲೂ ತುಳಿತಕ್ಕೊಳಗಾದವರು ಮತ್ತು ಬಡವರ ಪರವಾಗಿ ನಿಂತ ನಾಯಕ" ಎಂದು ಪಂಡಿತ್ ವಿಜಯ್ ಕುಮಾರ್ ಬಣ್ಣಿಸಿದ್ದಾರೆ.
ಗೂಗಲ್ ಟ್ರೆಂಡ್ಸ್ನಲ್ಲಿ ಖಮೇನಿ ಅಂತ್ಯಕ್ರಿಯೆ:

ಇನ್ನು ಗೂಗಲ್ ಟ್ರೆಂಡ್ಸ್ನಲ್ಲಿ ಇರನ್ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಸ್ಥಾನ ಪಡೆದುಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 100ರಷ್ಟು, ತೆಲಂಗಾಣದಲ್ಲಿ ಶೇ. 25ರಷ್ಟು, ಕರ್ನಾಟಕದಲ್ಲಿ ಶೇ. 25ರಷ್ಟು, ತಮಿಳುನಾಡಿನಲ್ಲಿ ಶೇ. 23ರಷ್ಟು ಮತ್ತು ದೆಹಲಿಯಲ್ಲಿ ಶೇ. 23ರಷ್ಟು ಜನ ಖಮೇನಿ ಅಂತ್ಯಕ್ರಿಯೆ ಬಗ್ಗೆ ಸರ್ಚ್ ಮಾಡಿದ್ದಾರೆ.

