ತಿರುವನಂತಪುರ (PTI): 'ಟೆಲಿಗ್ರಾಫ್' ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ರಾಮದಾಸ್ ಅವರ ಪಾಸ್ಪೋರ್ಟ್ ನವೀಕರಣ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿಕೇರಳಂ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳ ಪೊಲೀಸ್ ದೃಢೀಕರಣ ವರದಿಯು ವ್ಯತಿರಿಕ್ತವಾಗಿ ಬಂದ ಕಾರಣ ರಾಮದಾಸ್ ಅವರ ಪಾಸ್ಪೋರ್ಟ್ ನವೀಕರಣ ಅರ್ಜಿಯನ್ನು ತಡೆಹಿಡಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ನಡೆಯನ್ನು ಪತ್ರಕರ್ತರು ಮತ್ತು ರಾಜಕೀಯ ನಾಯಕರು ಟೀಕಿಸಿದ್ದಾರೆ.
'ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವೇಳೆ ರಾಜಗೋಪಾಲ್ ರಾಮದಾಸ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಕಾರಣ ಪೊಲೀಸ್ ವರದಿಯು ವ್ಯತಿರಿಕ್ತವಾಗಿ ಬಂದಿದೆ. ಹಿರಿಯ ಪತ್ರಕರ್ತ ರಾಮದಾಸ್ ಅವರು ಮಲಯಾಳಿ ಆಗಿದ್ದು, ಕಳೆದ ಮೂರು ದಶಕಗಳಿಂದ ಕೋಲ್ಕತ್ತದಲ್ಲಿ ನೆಲಸಿದ್ದಾರೆ. ಕೇರಳಂ ಗಾಂಧಿ ಸ್ಮಾರಕ ನಿಧಿಯ ರಾಜ್ಯ ಕಾರ್ಯದರ್ಶಿಯಾಗಿದ್ದ ಪ್ರೊ. ವಿ. ರಾಮದಾಸ್ ಅವರ ಪುತ್ರ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, 'ಪಾಸ್ಪೋರ್ಟ್ ನವೀಕರಣವನ್ನು ತಡೆಹಿಡಿದಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ. ಜಾಗತಿಕವಾಗಿ ಪ್ರಸಿದ್ಧರಾಗಿರುವ ಪತ್ರಕರ್ತರೊಬ್ಬರ ಪರಿಸ್ಥಿತಿಯೇ ಹೀಗಾದರೆ, ಜನಸಾಮಾನ್ಯರ ಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದು' ಎಂದು ಟೀಕಿಸಿದ್ದಾರೆ.

