ಇಂಫಾಲ: ಇಬ್ಬರು ಪಾದ್ರಿಗಳು ಸೇರಿ ಆರು ಮಂದಿ ನಾಗಾ ನಾಗರಿಕರನ್ನು ಅಪಹರಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಶನಿವಾರ ಮತ್ತಿಬ್ಬರನ್ನು ಬಂಧಿಸಿವೆ.
ಬಂಧಿತರನ್ನು ಕುಕಿ ಸಮುದಾಯದ ಬಾಹುಳ್ಯವಿರುವ ಕಾಂಗ್ಪೋಕ್ಪಿ ಜಿಲ್ಲೆಯ ಲೈಲಾನ್ ವೈಫೆಲ್ ಗ್ರಾಮದ ನಿವಾಸಿ ಲುಂಗೌಲಾಲ್ ವೈಫೇಯಿ ಹಾಗೂ ಮೊಲ್ಹೋಯಿ ಗ್ರಾಮದ ಲುನ್ಮಿಂಥಾಂಗ್ ಸಿತ್ಲೌ ಅಲಿಯಾಸ್ ಜಾಕ್ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರನ್ನು ಬಂಧಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಜುಲೈ 10ರಂದು ಓIಂ, ಮಣಿಪುರ ಪೊಲೀಸರು ಹಾಗೂ ಅಖPಈ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ದಂಪತಿಯನ್ನು ಬಂಧಿಸಲಾಗಿತ್ತು. ಬಂಧಿತರನ್ನು ಲೈಲಾನ್ ವೈಫೆಲ್ ಗ್ರಾಮದ ನಿವಾಸಿಗಳಾದ ಪ್ರದೀಪ್ ಹಾಗೂ ಆತನ ಪತ್ನಿ ಅಯಿಂಗ್ಬಿ ಅಲಿಯಾಸ್ ಮಾಂಗೈಯ್ಯ ಎಂದು ಗುರುತಿಸಲಾಗಿದೆ.
ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಯುಮ್ನಾಮ್ ಖೇಮ್ ಚಂದ್ ಸಿಂಗ್ ಇತ್ತೀಚೆಗೆ ಭರವಸೆ ನೀಡಿದ್ದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ಮೇ 13ರಂದು ನಡೆದ ಘಟನೆಯೊಂದಿಗೆ ಸಂಬಂಧ ಹೊಂದಿದೆ. ಅಂದು ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ಹೊಂಚು ದಾಳಿ ನಡೆಸಿ ತಡೌ ಸಮುದಾಯದ ಮೂವರು ಚರ್ಚ್ ಮುಖಂಡರನ್ನು ಹತ್ಯೆಗೈದಿದ್ದರು.
ಈ ಘಟನೆಯ ನಂತರ ಕುಕಿ ಸಮುದಾಯದ 28 ಮಂದಿ ಹಾಗೂ ನಾಗಾ ಸಮುದಾಯದ 20 ಮಂದಿಯನ್ನು ರಾಜ್ಯದ ವಿವಿಧ ಭಾಗಗಳಿಂದ ಅಪಹರಿಸಲಾಗಿತ್ತು. ಅಪಹರಣಕ್ಕೀಡಾದ ನಾಗಾ ಸಮುದಾಯದ 20 ಮಂದಿಯಲ್ಲಿ 18 ಮಂದಿಯನ್ನು ಲೈಲಾನ್ ವೈಫೆಲ್ ಗ್ರಾಮದಿಂದಲೇ ಕರೆದೊಯ್ಯಲಾಗಿತ್ತು.
ಮೇ 15ರಂದು ನಾಗಾ ಬಂಡುಕೋರರು ಕುಕಿ ಸಮುದಾಯದ 14 ಮಂದಿ ನಾಗರಿಕರನ್ನು ಬಿಡುಗಡೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಕುಕಿ ಬಂಡುಕೋರರು ನಾಗಾ ಸಮುದಾಯದ 14 ಮಂದಿಯನ್ನು ಬಿಡುಗಡೆಗೊಳಿಸಿದ್ದರು.
ಆದರೆ, ಮರುದಿನವೇ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಆರು ಛಿದ್ರಗೊಂಡ ಮೃತದೇಹಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ನಂತರ ಅವು ಅಪಹರಣಕ್ಕೀಡಾಗಿದ್ದ ನಾಗಾ ಸಮುದಾಯದ ಆರು ನಾಗರಿಕರ ಮೃತದೇಹಗಳಾಗಿವೆ ಎಂಬುದು ದೃಢಪಟ್ಟಿತ್ತು.

