ಮೊದಲ ಪರೀಕ್ಷೆಗೆ ಒಟ್ಟು 22,05,035 ಅಭ್ಯರ್ಥಿಗಳು ಹಾಜಾರಾಗಿದ್ದರು.
ಆದರೆ, ಮರು ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಹಾಜರಾತಿಯಲ್ಲಿ ಶೇ. 9ರಷ್ಟು ಇಳಿಕೆ ಕಂಡು ಬಂದಿದೆ. ನಿಖರವಾದ ಅಂಕಿ-ಅಂಶಗಳನ್ನು ಕ್ರೋಢೀಕರಿಸಲಾಗುತ್ತಿದೆ ಎಂದು ಎನ್ಟಿಎ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಪರೀಕ್ಷೆ ಮತ್ತು ಮರು ಪರೀಕ್ಷೆಯ ನಡುವಿನ ಅವಧಿಯಲ್ಲಿ ಕನಿಷ್ಠ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಉಂಟಾದ ಮಾನಸಿಕ ಆಘಾತ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪರೀಕ್ಷಾ ಪ್ರಕ್ರಿಯೆಯ ಕುರಿತು ನಂಬಿಕೆ ಕಳೆದುಕೊಂಡಿರುವುದು ಇದಕ್ಕೆ ಕಾರಣ ಎಂದು ಶಿಕ್ಷಣ ಕ್ಷೇತ್ರದ ತಜ್ಞರು ಬೆರಳು ಮಾಡಿ ತೋರಿಸಿದ್ದಾರೆ.
ಆದರೆ, ಬದಲಾದ ಪರಿಸ್ಥಿತಿಗಳು ಅಥವಾ ಪ್ರಾಯೋಗಿಕ ಕಾರಣಗಳನ್ನು ಎನ್ಟಿಎ ಮೂಲಗಳು ಉಲ್ಲೇಖಿಸಿವೆ. ''ದೊಡ್ಡ ಸಂಖ್ಯೆ ಆಕಾಂಕ್ಷಿಗಳು ಜೆಇಇ ಪರೀಕ್ಷೆ (ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆ) ಮತ್ತು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ (ಐಐಟಿ ಪ್ರವೇಶ ಪರೀಕ್ಷೆ)ಯನ್ನು ಕೂಡ ಬರೆಯುತ್ತಾರೆ. ಅವರು ಅದರಲ್ಲಿ ಉತ್ತಮ ನಿರ್ವಹಣೆ ತೋರಿದರೆ ವೈದ್ಯರಾಗುವ ಕನಸನ್ನು ಕೈಬಿಡಲು ನಿರ್ಧರಿಸಿರಬಹುದು'' ಎಂದು ಎನ್ಟಿಎ ಮೂಲವೊಂದು ತಿಳಿಸಿದೆ.
ಕೆಲವು ಆಕಾಂಕ್ಷಿಗಳು ವಿದೇಶಿ ಸಂಸ್ಥೆಗಳಿಗೂ ಅರ್ಜಿ ಸಲ್ಲಿಸುತ್ತಾರೆ. ವಿದೇಶದಲ್ಲಿ ಓದುವುದನ್ನು ಹೆಚ್ಚಿನ ಭಾರತೀಯರು ಪ್ರತಿಷ್ಠಿತ ಎಂದು ಪರಿಗಣಿಸುವುದರಿಂದ ಪರೀಕ್ಷೆಯಿಂದ ಹೊರಗುಳಿಯಲು ನಿರ್ಧರಿಸಿರಬಹುದು.
ಮತ್ತೊಂದು ಮೂಲದ ಪ್ರಕಾರ, ಮೇ 6ರಂದು ಮೂಲ ಪರೀಕ್ಷೆಯ ಉತ್ತರ ಕೀಗಳನ್ನು ಬಿಡುಗಡೆ ಮಾಡಿದ ನಂತರ ಕೆಲವು ಆಕಾಂಕ್ಷಿಗಳು ತಾವು ಇಂತಹ ಕಠಿಣವಾದ ಪರೀಕ್ಷೆಗೆ ಸೂಕ್ತವಲ್ಲ ಎಂದು ಭಾವಿಸಿರಬಹುದು.

