ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಧೀಶ ಎಸ್.ಆರ್. ಸಾಲುಂಖೆ, "ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿರುವ ಪುಟ್ಟ ಮಗುವಿನ ಕೊನೆಯ ಕಿರುಚಾಟವನ್ನು ನ್ಯಾಯಾಲಯವು ಮರೆಯಲು ಸಾಧ್ಯವಿಲ್ಲ. ಮಗುವಿನ ದೇಹದ ಮೇಲಿನ 18 ಗಾಯಗಳು ಮತ್ತು ಆಕೆ ಅನುಭವಿಸಿದ ನೋವನ್ನು ನ್ಯಾಯಾಲಯ ಪರಿಗಣಿಸಬೇಕಾಗಿದೆ" ಎಂದು ಹೇಳಿದ್ದಾರೆ.
ಮೂಲತಃ ಪುಣೆ ಜಿಲ್ಲೆಯ ಭೋರ್ ತಾಲ್ಲೂಕಿನ ಸಾಲ್ವಾಡೆ ಗ್ರಾಮದ ನಿವಾಸಿಯಾಗಿರುವ ಭೀಮರಾವ್ ಪ್ರಭಾಕರ್ ಕಾಂಬ್ಳೆಗೆ ಏಳು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಪುಣೆ ಪೊಲೀಸರ ತನಿಖೆಯಲ್ಲಿ ಆತನ ವಿರುದ್ಧ ಈ ಹಿಂದೆಯೂ ಹಲವು ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಮೃತ ಬಾಲಕಿಯ ಕುಟುಂಬವು ಪುಣೆಯ ಧಯಾರಿ ಪ್ರದೇಶದ ನಿವಾಸಿಗಳಾಗಿದ್ದು, ಮೂರು ವರ್ಷದ ಬಾಲಕಿ ಮತ್ತು ಆಕೆಯ ಆರು ವರ್ಷದ ಅಕ್ಕ ರಜಾದಿನಗಳಲ್ಲಿ ನಸ್ರಾಪುರದಲ್ಲಿರುವ ತಮ್ಮ ಪೂರ್ವಜರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.
ಮೇ 1ರಂದು ಏನಾಯಿತು?
ನಸ್ರಾಪುರದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಕಾಂಬ್ಳೆ, ಮೇ 1ರಂದು ಕೆಲಸಕ್ಕೆ ಹೋಗಿರಲಿಲ್ಲ. ಆ ದಿನ ಆತ ಸ್ಥಳೀಯ ದೇವಸ್ಥಾನದ ಬಳಿ ಕುಳಿತಿದ್ದ. ಅದೇ ವೇಳೆ ಮೂರು ವರ್ಷದ ಬಾಲಕಿ ದೇವಸ್ಥಾನದ ಆವರಣದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು.
ದೇವಸ್ಥಾನದ ಮುಂದೆ ನಿಂತಿದ್ದ ಮೋಟಾರ್ ಸೈಕಲ್ ಮೇಲೆ ಮಕ್ಕಳು ಕುಳಿತಿದ್ದ ಕಾರಣ ಕಾಂಬ್ಳೆ ಕೋಪಗೊಂಡು ಅವರ ಮೇಲೆ ಇಟ್ಟಿಗೆಗಳನ್ನು ಎಸೆದಿದ್ದ. ಬಳಿಕ ಮಕ್ಕಳು ಅಲ್ಲಿಂದ ತೆರಳಿದ್ದರು. ಸಂಜೆ ಸುಮಾರು 4 ಗಂಟೆಗೆ ಬಾಲಕಿ ಕಾಣೆಯಾಗಿರುವುದನ್ನು ಆಕೆಯ ಅಜ್ಜಿ ಗಮನಿಸಿದ್ದರು.
ಪೊಲೀಸರು ಮತ್ತು ಗ್ರಾಮಸ್ಥರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾಂಬ್ಳೆ ಬಾಲಕಿಯನ್ನು ಸಮೀಪದ ಗೋಶಾಲೆಯತ್ತ ಕರೆದೊಯ್ಯುತ್ತಿರುವುದು ಕಂಡುಬಂದಿತು. ನಂತರ ವಿಚಾರಣೆ ವೇಳೆ ಆತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಣಿಚೀಲದ ಕೆಳಗೆ ಶವ ಪತ್ತೆ
ಗ್ರಾಮಸ್ಥರು ಗೋಣಿಚೀಲದ ಕೆಳಗೆ ಮರೆಮಾಚಲಾಗಿದ್ದ ಬಾಲಕಿಯ ಶವವನ್ನು ಪತ್ತೆಹಚ್ಚಿದರು. ಬಾಲಕಿಯ ಬಾಯಿಯಲ್ಲಿ ಲೆಗ್ಗಿಂಗ್ಸ್ ತುರುಕಲಾಗಿತ್ತು. ಮುಖ, ಎದೆ, ಖಾಸಗಿ ಅಂಗಗಳು ಮತ್ತು ಗುದದ್ವಾರದ ಬಳಿ ಗಾಯಗಳ ಗುರುತುಗಳು ಕಂಡುಬಂದಿದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ವೈದ್ಯಕೀಯ ಮತ್ತು ಡಿಎನ್ಎ ಸಾಕ್ಷ್ಯಗಳು
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದ ಮೇಲೆ 18 ಗಾಯಗಳು ಕಂಡುಬಂದಿವೆ. ಯೋನಿ ಮತ್ತು ಗುದದ್ವಾರದ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಹಾಗೂ ದೇಹದ ಮೇಲೆ ವೀರ್ಯದ ಗುರುತುಗಳು ಪತ್ತೆಯಾಗಿವೆ. ಎದೆಗೆ ಬಲವಾದ ಪೆಟ್ಟು, ಬಾಯಿ ಮುಚ್ಚುವಿಕೆ ಮತ್ತು ಉಸಿರುಗಟ್ಟುವಿಕೆಯ ಪರಿಣಾಮದಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯಕೀಯ ವರದಿ ತಿಳಿಸಿದೆ.
ಡಿಎನ್ಎ ಪರೀಕ್ಷೆಯು ಆರೋಪಿಯ ವಿರುದ್ಧದ ಆರೋಪಗಳನ್ನು ದೃಢಪಡಿಸಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಮಧ್ಯಾಹ್ನ 3.12ಕ್ಕೆ ಕಾಂಬ್ಳೆ ಮತ್ತು ಬಾಲಕಿ ಒಟ್ಟಿಗೆ ಗೋಶಾಲೆಯತ್ತ ತೆರಳಿದ್ದು, ಮಧ್ಯಾಹ್ನ 3.51ಕ್ಕೆ ಕಾಂಬ್ಳೆ ಒಬ್ಬನೇ ಹೊರಬಂದಿರುವುದು ದಾಖಲಾಗಿದೆ.
'ಅಪರೂಪದ ಪ್ರಕರಣಗಳಲ್ಲಿ ಅಪರೂಪ'
ವಿಶೇಷ ಸಾರ್ವಜನಿಕ ಅಭಿಯೋಜಕ ಅಜಯ್ ಮಿಸಾರ್ ಅವರು ಎಲೆಕ್ಟ್ರಾನಿಕ್ ಹಾಗೂ ವೈದ್ಯಕೀಯ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು. ಮಾಹಿತಿದಾರರ ಪರ ವಕೀಲ ವಿಪುಲ್ ದುಶಿಂಗ್, ಆರೋಪಿಯ ಹಿಂದಿನ ಅಪರಾಧ ಹಿನ್ನೆಲೆ ಮತ್ತು ಕ್ರೂರತೆಯನ್ನು ಉಲ್ಲೇಖಿಸಿದರು.
ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ, "ಅಪರಾಧದ ಕ್ರೌರ್ಯ, ಅದು ನಡೆದ ರೀತಿ ಮತ್ತು ಮೂರು ವರ್ಷದ ಮಗುವಿನೊಂದಿಗೆ ಆರೋಪಿಯ ಅಮಾನವೀಯ ವರ್ತನೆಯು ಜೀವಾವಧಿ ಶಿಕ್ಷೆಯ ಸಾಧ್ಯತೆಯನ್ನು ತಳ್ಳಿಹಾಕುತ್ತದೆ. ಈ ಪ್ರಕರಣವು 'ಅಪರೂಪದ ಪ್ರಕರಣಗಳಲ್ಲಿ ಅಪರೂಪ' ಎಂಬ ವರ್ಗಕ್ಕೆ ಸೇರುತ್ತದೆ" ಎಂದು ಹೇಳಿ ಮರಣದಂಡನೆ ವಿಧಿಸಿದೆ.
ಶಿಕ್ಷೆ ಪ್ರಕಟಿಸುವ ವೇಳೆ ಪ್ರಕರಣದ ತನಿಖೆಯಲ್ಲಿ ಶ್ರಮಿಸಿದ ಪುಣೆ ಪೊಲೀಸರ ಕಾರ್ಯವನ್ನು ನ್ಯಾಯಾಲಯ ಶ್ಲಾಘಿಸಿದೆ.

