ನವದೆಹಲಿ: ಪೌರತ್ವ ನಿರ್ಧರಿಸುವ ಪ್ರಕ್ರಿಯೆಯನ್ನು ನ್ಯಾಯಸಮ್ಮತ, ಕಾನೂನುಬದ್ಧ ಮತ್ತು ತರ್ಕಬದ್ಧ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದ್ದು, 27 ಮಂದಿಯನ್ನು ವಿದೇಶಿಯರು ಎಂದು ಘೋಷಿಸಿ ಗುವಾಹಟಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸೋಮವಾರ ರದ್ದುಗೊಳಿಸಿದೆ.
'ಕಾನೂನಿನ ಅಡಿಯಲ್ಲಿ ಸಮಾನತೆಯ ರಕ್ಷಣೆ, ಕಾನೂನಿನ ಅಡಿಯಲ್ಲಿ ದೊರಕುವ ರಕ್ಷಣೆಯಲ್ಲಿ ಸಮಾನತೆ, ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವು ಭಾರತದ ಗಡಿಯೊಳಗಿನ ಪ್ರತಿಯೊಬ್ಬ ವ್ಯಕ್ತಿಗೂ ಲಭ್ಯವಿದೆ' ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಹೇಳಿತು.
'ಭಾರತೀಯ ಪೌರತ್ವ ಪಡೆಯಲು ಅರ್ಹರಲ್ಲದ ವ್ಯಕ್ತಿಗಳು ಸುಳ್ಳು ದಾಖಲೆ ಮೂಲಕ ಅಂತಹ ಸ್ಥಾನಮಾನ ಪಡೆಯದಂತೆ ನೋಡಿಕೊಳ್ಳುವ ಕಾನೂನುಬದ್ಧ ಅಧಿಕಾರ ಸರ್ಕಾರಕ್ಕೆ ಇದೆ. ಅದೇ ವೇಳೆ, ಪೌರತ್ವ ನಿರ್ಧರಿಸುವ ಪ್ರಕ್ರಿಯೆ ನ್ಯಾಯಯುತವಾಗಿರಬೇಕು' ಎಂದಿತು.
ಈ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಂಬಂಧಪಟ್ಟ ನ್ಯಾಯಮಂಡಳಿಗಳಿಗೆ ಹಿಂದಿರುಗಿಸಿದ ಪೀಠ, 'ಸಂಬಂಧಿತ ನ್ಯಾಯಮಂಡಳಿಗಳು ಪ್ರಕರಣಗಳ ವಿಚಾರಣೆಯನ್ನು ಹೊಸದಾಗಿ ನಡೆಸಬೇಕು. ಈ ವೇಳೆ, ಹೈಕೋರ್ಟ್ ಅಥವಾ ನ್ಯಾಯಮಂಡಳಿಗಳು ಈ ಹಿಂದೆ ವ್ಯಕ್ತಪಡಿಸಿರುವ ಯಾವುದೇ ಅಂಶಗಳ ಪ್ರಭಾವಕ್ಕೆ ಒಳಗಾಗಬಾರದು' ಎಂದಿತು.
'ಮೇಲ್ಮನವಿದಾರರು ಪೌರತ್ವಕ್ಕಾಗಿ ಸಲ್ಲಿಸಿರುವ ಅರ್ಜಿಯ ಅರ್ಹತೆಯನ್ನು ಈ ನ್ಯಾಯಾಲಯ ಪರಿಶೀಲಿಸಿಲ್ಲ. ಅವರು ಹೊಂದಿರುವ ಯಾವುದೇ ದಾಖಲೆಯ ನೈಜತೆ, ಪ್ರಸ್ತುತತೆ ಅಥವಾ ಸಮರ್ಪಕತೆಯ ಬಗ್ಗೆ ತನ್ನ ಅಭಿಪ್ರಾಯವನ್ನೂ ವ್ಯಕ್ತಪಡಿಸಿಲ್ಲ' ಎಂದು ಸ್ಪಷ್ಟಪಡಿಸಿದ ಪೀಠ, 'ಅವುಗಳನ್ನು ಸಂಬಂಧಪಟ್ಟ ನ್ಯಾಯಮಂಡಳಿಗಳು ಸ್ವತಂತ್ರವಾಗಿ ನಿರ್ಧರಿಸಬೇಕು' ಎಂದಿತು.
ಗೋಹತ್ಯೆ ನಿಷೇಧ: ಹೈಕೋರ್ಟ್ ಆದೇಶಕ್ಕೆ 'ಸುಪ್ರೀಂ' ತಡೆ
ರಾಜ್ಯದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ತಮಿಳುನಾಡು ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ನ್ಯಾಯಪೀಠ, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಈ ಕುರಿತು ಅರ್ಜಿ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದ ಸುಪ್ರೀಂ ಕೋರ್ಟ್, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ರಾಜ್ಯದಾದ್ಯಂತ ಮೇ 27ರಿಂದ ಯಾವುದೇ ಹಸು-ಕರುಗಳನ್ನು ಹತ್ಯೆ ಮಾಡದಂತೆ ತಡೆಯಲು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ನಿಗದಿತ ಸ್ಥಳಗಳಲ್ಲಿ ಮಾತ್ರ ಗೋಹತ್ಯೆಗೆ ಅನುಮತಿ ನೀಡುವಂತೆ ಹಿಂದೂ ಮಕ್ಕಳ್ ಕಚ್ಚಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಅವರು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ಆದರೆ, ತಮಿಳುನಾಡಿನಲ್ಲಿ ಹಸು-ಕರುಗಳ ಹತ್ಯೆಯನ್ನು ಹೈಕೋರ್ಟ್ ನಿಷೇಧಿಸಿ ಆದೇಶ ನೀಡಿತ್ತು.


