ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಕಲಾಪಗಳಿಗೆ ಕಾಂಗ್ರೆಸ್ ಅಡ್ಡಿಪಡಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ಆರೋಪಿಸಿದ್ದಾರೆ.
ಅಧಿವೇಶನದ ಕೊನೇ ದಿನವೂ ಸದನದಲ್ಲಿ ಗದ್ದಲ ಏರ್ಪಟ್ಟಿತು. ಇದರಿಂದಾಗಿ, ಸಂಸತ್ತಿನ ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ರಿಜಿಜು, ಸದನದ ಕಲಾಪವು ಸರ್ಕಾರಕ್ಕೆ ತೃಪ್ತಿ ತಂದಿಲ್ಲ ಎಂದಿದ್ದಾರೆ.
'ಕೇಂದ್ರ ಸರ್ಕಾರವು ಚರ್ಚೆ ನಡೆಸಲು ಬಯಸುತ್ತಿರುವಾಗ, ವಿರೋಧ ಪಕ್ಷವು ಚರ್ಚೆಯಿಂದ ಪಲಾಯನ ಮಾಡುತ್ತಿರುವುದನ್ನು ಕಂಡಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಸದನದ ಕಲಾಪಗಳಿಗೆ ಅಡ್ಡಿಯುಂಟಾಗಿದ್ದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿವೇಶನದ ವೇಳೆ 12 ಮಸೂದೆಗಳು ಅಂಗೀಕಾರಗೊಂಡಿವೆ. ದುರದೃಷ್ಟವಶಾತ್, ಅವುಗಳಲ್ಲಿ 11 ಮಸೂದೆಗಳು ಚರ್ಚೆಯೇ ಇಲ್ಲದೆ ಅಂಗೀಕಾರವಾಗಿವೆ ಎಂದು ತಿಳಿಸಿದ್ದಾರೆ.
'ಲೋಕಸಭೆಯಲ್ಲಿ 11 ಮಸೂದೆಗಳು ಚರ್ಚೆಯಿಲ್ಲದೆ ಅಂಗೀಕಾರಗೊಂಡಿವೆ. ಒಂದು ಮಸೂದೆಯ ಬಗ್ಗೆಯಷ್ಟೇ ಉಭಯ ಸದನಗಳಲ್ಲಿ ಚರ್ಚೆಯಾಯಿತು. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಮತ್ತು ಇನ್ನು ಕೆಲವು ಪಕ್ಷಗಳ ನಾಯಕರು ಚರ್ಚೆಯ ವೇಳೆ ಸದನದಿಂದ ಹೊರನಡೆದರು. ಉಳಿದ ವಿರೋಧ ಪಕ್ಷಗಳು ಚರ್ಚೆಯಲ್ಲಿ ಭಾಗವಹಿಸಿದವು' ಎಂದು ತಿಳಿಸಿದ್ದಾರೆ.
ಮುಂಗಾರು ಅಧಿವೇಶನವು ಜುಲೈ 20ರಂದು ಆರಂಭವಾಗಿದೆ.

