ನವದೆಹಲಿ: ಸಿಬಿಐ ತನಿಖೆಯನ್ನು ಪೂರ್ಣಗೊಳಿಸಿದ್ದರೂ ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ನೇಮಕಾತಿ ಮತ್ತು ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಸುಮಾರು 158 ಪ್ರಕರಣಗಳು ಇನ್ನೂ ವಿಚಾರಣೆಗಾಗಿ ಕಾಯುತ್ತಿವೆ, ಇವುಗಳಲ್ಲಿ ಕೆಲವು ಎರಡು ದಶಕಗಳಿಗಿಂತಲೂ ಹಳೆಯದಾಗಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಇತ್ತೀಚೆಗೆ ತರಲಾಗಿರುವ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ ಕಾಯ್ದೆ 2026ರ ಅಡಿ ಸ್ಥಾಪಿಸಲಾಗುತ್ತಿರುವ ವಿಶೇಷ ತ್ವರಿತ ನ್ಯಾಯಾಲಯಗಳಿಗೆ ಈ ಬಾಕಿ ಇರುವ ಪ್ರಕರಣಗಳನ್ನು ವರ್ಗಾಯಿಸುವಂತೆ ಕೋರಿ ದೇಶಾದ್ಯಂತ ಇರುವ ಉಚ್ಚ ನ್ಯಾಯಾಲಯಗಳನ್ನು ಕೋರಲು ಸಿಬಿಐ ನಿರ್ಧರಿಸಿದೆ.
ಮೂಲಗಳ ಪ್ರಕಾರ, ವಿಚಾರಣೆಗಳನ್ನು ನಡೆಸಲು ಪ್ರತ್ಯೇಕ ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ಮತ್ತು ವಿಚಾರಣೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವುದಾಗಿ ಸಿಬಿಐ ಉಚ್ಚ ನ್ಯಾಯಾಲಯಗಳಿಗೆ ತಿಳಿಸಲಿದೆ.
ಸಿಬಿಐ ತನಿಖೆ ಪೂರ್ಣಗೊಂಡಿದ್ದರೂ ದಿಲ್ಲಿಯೊಂದರಲ್ಲೇ ಸುಮಾರು 25 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಬಿಹಾರದಲ್ಲಿ ಐದು, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಜಮ್ಮುಕಾಶ್ಮೀರದಲ್ಲಿ ತಲಾ ಮೂರು, ಜಾರ್ಖಂಡ್ ಮತ್ತು ಕರ್ನಾಟಕದಲ್ಲಿ ತಲಾ ಐದು, ರಾಜಸ್ಥಾನದಲ್ಲಿ ಎಂಟು, ತಮಿಳುನಾಡಿನಲ್ಲಿ 14, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 10 ಪ್ರಕರಣಗಳು ವಿಚಾರಣೆಗೆ ಕಾಯುತ್ತಿವೆ.
ಸರಕಾರಿ ಅಧಿಕಾರಿಗಳ ಪ್ರಕಾರ, ಪ್ರಕರಣಗಳು ವಿಚಾರಣೆಗೆ ಬರುವುದು ತಡವಾದಷ್ಟೂ ಅಪರಾಧಿಗಳಿಗೆ ಶಿಕ್ಷೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಸಮಯ ಕಳೆದಂತೆ ಸಾಕ್ಷಿಗಳಿಗೆ ವಯಸ್ಸಾಗುತ್ತದೆ ಅಥವಾ ಲಭ್ಯವಿರುವುದಿಲ್ಲ, ನೆನಪುಗಳು ಮಸುಕಾಗುತ್ತವೆ, ಆರೋಪಿಗಳನ್ನು ಗುರುತಿಸುವುದು ಕಷ್ಟವಾಗುತ್ತದೆ ಮತ್ತು ಹೇಳಿಕೆಗಳು ಆಗಾಗ್ಗೆ ಬದಲಾಗುತ್ತವೆ.
ಆಗಾಗ್ಗೆ ತನಿಖಾಧಿಕಾರಿಗಳು, ಸರಕಾರಿ ಅಭಿಯೋಜಕರು ಮತ್ತು ನ್ಯಾಯಾಧೀಶರ ವರ್ಗಾವಣೆಗಳು ಪ್ರಕ್ರಿಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತವೆ. ಇದರಿಂದಾಗಿ ಕೆಲವು ಪರೀಕ್ಷಾ ಅಕ್ರಮ ಪ್ರಕರಣಗಳು ಅಂತಿಮವಾಗಿ ವಜಾಗೊಳ್ಳುವ ಅಪಾಯವಿರುತ್ತದೆ ಎಂದು ಅಧಿಕಾರಿಗಳು ಹೇಳಿದರು.

