ಪಾಟ್ನಾ: ಇತ್ತೀಚೆಗೆ ಬಾಂಕೀಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಮುಂದಿನ ಎರಡು ವರ್ಷದಲ್ಲಿ ತಮ್ಮ ಕ್ಷೇತ್ರದ ಕನಿಷ್ಠ 10 ಸಾವಿರ ಯುವಜನರಿಗೆ ಖಾಸಗಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
'ನಿಮ್ಮ ಮಕ್ಕಳು ವಿದ್ಯಾವಂತರಾಗಿಯೂ ನಿರುದ್ಯೋಗಿಗಳಾಗಿದ್ದರೆ, ನಮ್ಮ ಕಚೇರಿಗೆ ಸ್ವವಿವರ ಪತ್ರ (ಸಿ.ವಿ) ಕಳುಹಿಸಿಕೊಡಿ. ಮುಂದಿನ ಎರಡು ವರ್ಷದಲ್ಲಿ ಕನಿಷ್ಠ 10 ಸಾವಿರ ಮಂದಿಗೆ ಉದ್ಯೋಗ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ. ಈ ಹಿಂದೆ ನನ್ನಿಂದ ಸಹಾಯ ಪಡೆದವರ ಸಂಪರ್ಕ ಬಳಸಿ, ದೇಶದ ವಿವಿಧ ಭಾಗಗಳಲ್ಲಿ ಕೆಲಸ ಸಿಗುವಂತೆ ಮಾಡುತ್ತೇನೆ' ಎಂದು ಅವರು ಬಾಂಕೀಪುರದಲ್ಲಿ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.
ಜನ ಸುರಾಜ್ ಪಕ್ಷ ಅಧಿಕಾರಕ್ಕೆ ಬಂದರೆ, ಬಿಹಾರದಲ್ಲೇ ಉದ್ಯೋಗ ಸಿಗುವಂತೆ ಮಾಡುತ್ತೇನೆ. ಸದ್ಯಕ್ಕೆ ರಾಜ್ಯದ ಒಳಗೆ ಹಾಗೂ ಹೊರಗೆ ಕೆಲಸ ಸಿಗುವಂತೆ ನೋಡಿಕೊಳ್ಳುತ್ತೇನೆ ಎಂದರು.
ಉದ್ಯೋಗ ಕೊಡಿಸುವುದರ ಜೊತೆಗೆ, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ಅಗತ್ಯ ಇರುವವರಿಗೆ ಆಹಾರ ಧಾನ್ಯಗಳು ಹಾಗೂ ಸಾಮಾಜಿಕ ಭದ್ರತೆಗಳನ್ನು ಒದಗಿಸಲು ಕೆಲಸ ಮಾಡುವೆ ಎಂದು ಭರವಸೆ ನೀಡಿದ್ದಾರೆ.
ಜನ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ಆ ರೀತಿಯಲ್ಲಿ ಒಂದು ವರ್ಷದೊಳಗೆ ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುತ್ತೇನೆ. ಒಂದು ವೇಳೆ ಹಾಗಾಗದಿದ್ದರೆ ಅವರ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಅವರ ಶುಲ್ಕವನ್ನು ಪಾವತಿಸುವ ಹೊಣೆ ಪ್ರಶಾಂತ್ ಕಿಶೋರ್ನದ್ದು ಎಂದು ಅವರು ಹೇಳಿದ್ದಾರೆ.
ಜಂತರ್ ಮಂತರ್ ಹಾಗೂ ಜಾರ್ಖಂಡ್ನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಬಲ ಪ್ರಯೋಗ ನಡೆಸಿದ್ದನ್ನು ಇದೇ ವೇಳೆ ಅವರು ಖಂಡಿಸಿದರು.

