2050ರ ವೇಳೆಗೆ ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ 35 ಕೋಟಿ ತಲುಪಲಿದ್ದು, ಅವರಿಗಾಗಿ ಸಮುದಾಯ ಆ2050ರ ವೇಳೆಗೆ ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ 35 ಕೋಟಿ ತಲುಪಲಿದ್ದು, ಅವರಿಗಾಗಿ ಸಮುದಾಯ ಆಧಾರಿತ ಆರೈಕೆ ವ್ಯವಸ್ಥೆಯನ್ನು ರೂಪಿಸುವುದು ಅತ್ಯಗತ್ಯವಾಗಿದೆ.
ಭಾರತದಲ್ಲಿ ವೃದ್ಧರ ಸಂಖ್ಯೆ ಎಷ್ಟು ಹೆಚ್ಚಾಗಲಿದೆ?
2050ರ ಹೊತ್ತಿಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಪ್ರತಿ ಐವರಲ್ಲಿ ಒಬ್ಬರು ಅಂದರೆ ಸುಮಾರು 34.7 ಕೋಟಿ ಜನರು 60 ವರ್ಷ ದಾಟಿದವರಾಗಿರುತ್ತಾರೆ.
ವೃದ್ಧರ ಆರೈಕೆಯಲ್ಲಿ ಗ್ರಾಮೀಣ ಭಾರತದ ಪಾತ್ರವೇನು?
ದೇಶದ ಹತ್ತರಲ್ಲಿ ಏಳು ಮಂದಿ ಹಿರಿಯರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಅವರ ಆರೈಕೆಗೆ ಸಮುದಾಯ ಮಟ್ಟದ ವ್ಯವಸ್ಥೆಗಳ ಅಗತ್ಯವಿದೆ.
ವೃದ್ಧರ ಆರೈಕೆಯಲ್ಲಿ ಮಹಿಳೆಯರ ಮೇಲಿರುವ ಹೊರೆ ಎಷ್ಟು?
ವೃದ್ಧರ ಆರೈಕೆಗಾಗಿ ಮಹಿಳೆಯರು ನಿತ್ಯ ಸರಾಸರಿ 305 ನಿಮಿಷಗಳನ್ನು ವ್ಯಯಿಸುತ್ತಾರೆ, ಇದು ಅವರ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತಿದೆ.
ಆರೈಕೆ ಆರ್ಥಿಕತೆಯಿಂದ ಆಗುವ ಲಾಭವೇನು?
ಭಾರತದ ಜಿಡಿಪಿಯ ಶೇ 2ರಷ್ಟನ್ನು ಆರೈಕೆ ಆರ್ಥಿಕತೆಯಲ್ಲಿ ಹೂಡಿಕೆ ಮಾಡುವುದರಿಂದ ಸುಮಾರು 1.1 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು.
ಸಮುದಾಯ ಆರೈಕೆ ಮಾದರಿಯನ್ನು ಹೇಗೆ ಜಾರಿಗೊಳಿಸಬಹುದು?
ಗ್ರಾಮ ಪಂಚಾಯಿತಿಗಳು, ಆಶಾ ಕಾರ್ಯಕರ್ತೆಯರು ಮತ್ತು ಸ್ವಸಹಾಯ ಗುಂಪುಗಳನ್ನು ಬಳಸಿಕೊಂಡು 'ನೆರೆಹೊರೆ ಆರೈಕೆ' ಮಾದರಿಯನ್ನು ಅಳವಡಿಸಿಕೊಳ್ಳಬೇಕು.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಜನಸಂಖ್ಯೆಗೆ ಸಂಬಂಧಿಸಿದಂತೆ ಭಾರತವು ವಿಚಿತ್ರ ಬೆಳವಣಿಗೆಯತ್ತ ಮುಖ ಮಾಡುತ್ತಿದೆ. ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳುವ ಮೊದಲೇ, ದೇಶದ ಪ್ರತಿ ಐವರಲ್ಲಿ ಒಬ್ಬರು 60 ವಯಸ್ಸನ್ನು ದಾಟುತ್ತಿದ್ದಾರೆ. ಅದರಲ್ಲೂ, ಹತ್ತರಲ್ಲಿ ಏಳು ಮಂದಿ ಗ್ರಾಮೀಣ ಭಾಗದಲ್ಲಿ ನೆಲೆಸಿದ್ದಾರೆ ಎಂಬ ಸಂಗತಿಯು 'ಟ್ರಾನ್ಸ್ಫಾರ್ಮ್ ರೂರಲ್ ಇಂಡಿಯಾ' (ಟಿಆರ್ಐ) ಬಿಡುಗಡೆ ಮಾಡಿರುವ ಅಧ್ಯಯನದಿಂದ ಹೊರಬಿದ್ದಿದೆ.
ಪ್ರತಿ ವೃದ್ಧರಿಗೆ ನೆರವಾಗಲು ಲಭ್ಯವಿರುವ ವಯಸ್ಕರ ಸಂಖ್ಯೆಯೂ ಕುಸಿಯುತ್ತಿದೆ. 2001ರಲ್ಲಿ ಸರಾಸರಿ 8.4 ರಷ್ಟು ಇದ್ದ ಈ ಸಂಖ್ಯೆ ಸರಾಸರಿ 5.2ಕ್ಕೆ ಇಳಿದಿದೆ ಎಂಬುದೂ ಅಧ್ಯಯನದಿಂದ ತಿಳಿದುಬಂದಿದೆ.
'ಜನಸಂಖ್ಯಾ ಪರಿವರ್ತನೆ, ವಿಕಸನಗೊಳ್ಳುತ್ತಿರುವ ಕುಟುಂಬ ವ್ಯವಸ್ಥೆ ಮತ್ತು ಗ್ರಾಮೀಣ ಭಾರತದಲ್ಲಿ ಆರೈಕೆ ಪರಿಸರದ ಭವಿಷ್ಯ' ಎಂಬ ಶೀರ್ಷಿಕೆಯ ವರದಿಯನ್ನು ಟಿಆರ್ಐ ಬಿಡುಗಡೆ ಮಾಡಿದೆ.
'2050ರ ವೇಳೆಗೆ ಭಾರತದ ಪ್ರತಿ ಐವರಲ್ಲಿ ಒಬ್ಬರು ಅಂದರೆ, ಸುಮಾರು 34.7 ಕೋಟಿ ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿರುತ್ತಾರೆ. ಅದರಲ್ಲೂ ಹತ್ತರಲ್ಲಿ ಏಳು ಜನ ವೃದ್ಧರು ಗ್ರಾಮೀಣ ಪ್ರದೇಶಗಳಲ್ಲೇ ವಾಸಿಸುತ್ತಿರುತ್ತಾರೆ. ಜನಸಂಖ್ಯೆಯು ವೃದ್ಧಾಪ್ಯ ತಲುಪುವ ಮುನ್ನ ಅಭಿವೃದ್ಧ ಹೊಂದಿದ ಅನೇಕ ದೇಶಗಳಿಗೆ ಹೋಲಿಸಿದರೆ, ಇದು ಭಿನ್ನವಾದ ವಿದ್ಯಮಾನವಾಗಿದೆ' ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್), ದೇಶದ ವೃದ್ಧಾಪ್ಯ ಅಧ್ಯಯನ, ಜನಗಣತಿ ಅಂದಾಜು, ಸಮಯದ ಬಳಕೆ ಮತ್ತು ಇತರ ರಾಷ್ಟ್ರೀಯ ದತ್ತಾಂಶಗಳನ್ನು ಆಧರಿಸಿ, ಕುಟುಂಬಗಳು ಹಿಂದೆಂದಿಗಿಂತಲೂ ಪುಟ್ಟದಾಗಿರುವುದು, ಯುವ ಪೀಳಿಗೆಯವರು ಕೆಲಸ ಅರಸಿ ಬೇರೆಡೆಗೆ ಹೋಗುತ್ತಿರುವುದು ಮತ್ತು ಸರಾಸರಿ ವಯಸ್ಸು ಹೆಚ್ಚಾಗುತ್ತಿರುವುದು ಕುಟುಂಬ ಆಧಾರಿತ ಆರೈಕೆ ವ್ಯವಸ್ಥೆಯಲ್ಲಿ ಒತ್ತಡ ಹೆಚ್ಚಾಗಿದೆ ಎಂಬುದನ್ನು ವಿವರಿಸಲಾಗಿದೆ.
'ಆದಾಗ್ಯೂ, ಸರಿಸುಮಾರು ಶೇ 94ರಷ್ಟು ವೃದ್ಧರ ಆರೈಕೆಯು ಈಗಲೂ ಮನೆಗಳಲ್ಲಿಯೇ ನಡೆಯುತ್ತಿದೆ. ಕುಟುಂಬಗಳ ಗಾತ್ರ ಕುಸಿಯುತ್ತಿವೆಯಾದರೂ, ಅವುಗಳಲ್ಲಿನ ಕಡಿಮೆ ಸದಸ್ಯರೇ ಆರೈಕೆಯಲ್ಲಿ ತೊಡಗುವಂತಾಗುತ್ತಿದೆ' ಎಂದೂ ಹೇಳಲಾಗಿದೆ.
ವೃದ್ಧರ ಆರೈಕೆಯ ಕಾರ್ಯಕ್ಕೆ ಪುರುಷರು ನಿತ್ಯ ಸರಾಸರಿ 56 ನಿಮಿಷ ವ್ಯಯಿಸಿದರೆ, ಮಹಿಳೆಯರು ಸುಮಾರು 305 ನಿಮಿಷಗಳನ್ನು ಮೀಸಲಿಡುತ್ತಿದ್ದಾರೆ. ಇದು ವೇತನರಹಿತ ಕೆಲಸವಾಗಿದ್ದು, ಈ ರೀತಿ ವೇತನವಿಲ್ಲದ ಕೆಲಸದ ಹಂಚಿಕೆಯು ಮಹಿಳೆಯರ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಗೆ ತಡೆಯಾಗಿದೆ. ಹಾಗೆಯೇ, ಹವಾಮಾನ ವೈಪರೀತ್ಯದಂತ ಪರಿಸ್ಥಿತಿಗಳೂ ಮಹಿಳೆಯರಿಗೆ ಹೊರೆಯಾಗಿ ಪರಿಣಮಿಸುತ್ತಿದೆ ಎಂದು ಒತ್ತಿ ಹೇಳಲಾಗಿದೆ.
ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಂದ ಮೂರನೇ 2ರಷ್ಟು ಸಾವು
ಸದ್ಯ ಭಾರತದಲ್ಲಿ ಸಂಭವಿಸುತ್ತಿರುವ ಮೂರನೇ ಎರಡರಷ್ಟು ಸಾವುಗಳಿಗೆ ಸಾಂಕ್ರಾಮಿಕವಲ್ಲದ ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಇನ್ನಿತರ ಅನಾರೋಗ್ಯಗಳು ಕಾರಣವಾಗುತ್ತಿವೆ.
ಹೆರಿಗೆ, ರೋಗ ನಿರೋಧಕಗಳು ಮತ್ತು ತೀವ್ರ ಸ್ವರೂಪದ ಕಾಯಿಲೆಗಳ ಸುತ್ತಲೇ ದೇಶದ ಆರೋಗ್ಯ ವ್ಯವಸ್ಥೆಯು ವಿನ್ಯಾಸಗೊಂಡಿದೆ ಎಂಬುದು ಗಮನಿಸಬೇಕಾದ ಸಂಗತಿ.
'ದೀರ್ಘಕಾಲದ ಅನಾರೋಗ್ಯ, ಅಂಗವೈಕಲ್ಯ ಮತ್ತು ವೃದ್ಧಾಪ್ಯದ ಸವಾಲುಗಳೊಂದಿಗೆ ಬದುಕುತ್ತಿರುವ ಜನರಿಗೆ ಬೆಂಬಲವಾಗಿ ನಿಲ್ಲುವಂತಹ ಸವಾಲು ಆರೋಗ್ಯ ವ್ಯವಸ್ಥೆಯ ಮುಂದಿದೆ. ಕೇವಲ ಆಸ್ಪತ್ರೆಗಳಿಂದ ಇದು ಸಾಧ್ಯವಿಲ್ಲ' ಎಂದು ವಿವರಿಸಲಾಗಿದೆ.
ಗ್ರಾಮೀಣ ಸಂಸ್ಥೆಗಳಾದ ಗ್ರಾಮ ಪಂಚಾಯಿತಿಗಳು, ಸ್ವಸಹಾಯ ಗುಂಪುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕೇಂದ್ರಗಳು ಮತ್ತು ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಒಂದೇ ಸಮುದಾಯ ಆರೈಕೆ ಜಾಲಕ್ಕೆ ಸಂಪರ್ಕಿಸಲು 'ನೆರೆಹೊರೆ ಆರೈಕೆ' ಮಾದರಿಯನ್ನು ಟಿಆರ್ಐ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಆರೈಕೆ ಆರ್ಥಿಕತೆಯ ಪ್ರತಿಪಾದನೆ
ಆರೈಕೆಯನ್ನು ಆರ್ಥಿಕ ಅವಕಾಶವಾಗಿಯೂ ಕಂಡುಕೊಳ್ಳಬಹುದು ಎಂಬುದಾಗಿ ಟಿಆರ್ಐ ಪ್ರತಿಪಾದಿಸಿದೆ. ಭಾರತದ ಜಿಡಿಪಿಯ ಶೇ 2ರಷ್ಟನ್ನು ಆರೈಕೆ ಆರ್ಥಿಕತೆಯ ಮೇಲೆ ಹೂಡಿಕೆ ಮಾಡುವುದರಿಂದ, ಸುಮಾರು 1.1 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬಹುದು. ಮುಖ್ಯವಾಗಿ ಗ್ರಾಮೀಣ ಮಹಿಳೆಯರಿಗೆ ಅವಕಾಶ ಸಿಕ್ಕಂತಾಗುತ್ತದೆ ಎಂದು ಅಂದಾಜಿಸಲಾಗಿದೆ.
'ಜನರು ಹೆಚ್ಚು ಕಾಲ ಚೆನ್ನಾಗಿ ಬದುಕುವುದನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ, ಆರೈಕೆ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಬೇಕಾಗಿದೆ. ಆರೈಕೆಯನ್ನು ಸಮುದಾಯ ಕಾರ್ಯವನ್ನಾಗಿ ರೂಪಿಸಿ, ಸುಸ್ಥಿರ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವುದು ಅಗತ್ಯವಾಗಿದೆ' ಎಂದು ಟಿಆರ್ಐ ಅಧಿಕಾರಿ ಶ್ಯಾಮಲ್ ಸಂತ್ರಾ ಹೇಳಿದ್ದಾರೆ.
ಸಮುದಾಯ ಆರೈಕೆ ವ್ಯವಸ್ಥೆ ಸಾಧ್ಯವಾಗಲು ಬೇಕಾದ ಸಂಸ್ಥೆಗಳು ಗ್ರಾಮೀಣ ಭಾರತದಾದ್ಯಂತ ಈಗಾಗಲೇ ಇವೆ. ಅವುಗಳನ್ನು ಸಂಪರ್ಕಿಸುವ, ಅದಕ್ಕೆ ಪೂರಕವಾದ ಪರಿಸರವನ್ನು ನಿರ್ಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

