ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿ ದಿಲ್ಲಿಯಲ್ಲಿ ಸೆಪ್ಟೆಂಬರ್ 5ರಂದು ಪಾದಯಾತ್ರೆ ನಡೆಸುವ ತನ್ನ ನಿರ್ಧಾರವನ್ನು ಕಾಕ್ರೋಚ್ ಜನತಾ ಪಕ್ಷ ಬುಧವಾರ ಪುನರುಚ್ಚರಿಸಿದೆ. ತನ್ನ ನಾಲ್ಕು ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ CJPಯು ಜುಲೈ 25ರಂದು ಹೊಸದಿಲ್ಲಿಯ ಜಂತರ್ಮಂತರ್ ನಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತ್ತು.
ಆದರೆ ಈ ಪೈಕಿ ಮೂರು ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲವಾದ ಕಾರಣ ಸೆಪ್ಟೆಂಬರ್ 5ರಂದು ಪ್ರತಿಭಟನೆ ನಡೆಸುವುದಾಗಿ CJP ತಿಳಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಬಳಿಕ ನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಲಾಗಿಲ್ಲ, ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಫ್ಐಆರ್ ಹಿಂಪಡೆಯಲಾಗಿಲ್ಲ ಹಾಗೂ ಪ್ರತಿಭಟನಕಾರರ ಮೇಲೆ ದೌರ್ಜನ್ಯ ನಡೆಸಿದ್ದಕ್ಕಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಹಾಗೂ ದಿಲ್ಲಿ ಪೊಲೀಸರು ಇನ್ನೂ ಕ್ಷಮೆಯಾಚಿಸಿಲ್ಲವೆಂದು CJP ಹೇಳಿಕೆಯಲ್ಲಿ ತಿಳಿಸಿದೆ.
ಜುಲೈ 20ರಂದು ದಿಲ್ಲಿಯಲ್ಲಿ ಪ್ರತಿಭಟನಕಾರರ ವಿರುದ್ಧ ನಡೆದ ದೌರ್ಜನ್ಯವು ಕರಾಳ ಸೋಮವಾರವೆಂದು CJPಯು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ ಹಾಗೂ ಘಟನೆಯ ವೀಡಿಯೊ ದೃಶ್ಯಾವಳಿಗಳನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಸಾರ ಮಾಡಿದೆ.
ತನ್ನ ಪಕ್ಷದ ಪೋಸ್ಟ್ಗೆ ಪ್ರತಿಕ್ರಿಯಿಸಿರುವ CJPಯ ವಕ್ತಾರ ಅಶುತೋಷ್ ರಾಂಕಾ, ''ನಾವು ಹಿಮ್ಮೆಟ್ಟುವುದಿಲ್ಲ. ನಿಮ್ಮ ಬಳಿ ಅಧಿಕಾರವಿರಬಹುದು. ಆದರೆ ದೇಶವು ನಮ್ಮದು. ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ನಮ್ಮ ಬೇಡಿಕೆಗಳನ್ನು ಈಡೇರಿಸಿ. ಇಲ್ಲವೇ ಸೆಪ್ಟೆಂಬರ್ 5ರಂದು ಕಾಕ್ರೋಚ್ ಗಳನ್ನು ಎದುರಿಸಲು ಸಿದ್ಧರಾಗಿರಿ!'' ಎಂದು ಬರೆದಿದ್ದಾರೆ.
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್ ನಿಂದ ಆರಂಭಗೊಳ್ಳಲಿರುವ ಪಾದಯಾತ್ರೆಯು, ಹೊಸದಿಲ್ಲಿಯ ಪೊಲೀಸ್ ಮುಖ್ಯ ಕಚೇರಿಯವರೆಗೆ ಸಾಗಲಿದೆ ಎಂದು CJP ತಿಳಿಸಿದೆ.

