ನವದೆಹಲಿ: ಭಾರತ ಮತ್ತು ಚೀನಾದ ಸ್ವಾಯತ್ತ ಪ್ರಾಂತ್ಯವಾದ ಟಿಬೆಟ್ ನೊಂದಿಗೆ ಗಡಿ ಹಂಚಿಕೊಂಡಿರುವ ನೇಪಾಳ ಭಾಗದಲ್ಲಿ ಬುಧವಾರ ದಿಢೀರ್ ಪ್ರವಾಹ ಸಂಭವಿಸಿ, ಕನಿಷ್ಠ ನೂರು ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಇದರ ಬೆನ್ನಿಗೇ, ಭಾರತವು ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ ಸಾಮಗ್ರಿಗಳನ್ನೊಳಗೊಂಡ ಸೇನಾ ಸಾರಿಗೆ ವಿಮಾನವನ್ನು ನೇಪಾಳಕ್ಕೆ ರವಾನಿಸಿದೆ.
ನಿನ್ನೆ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ನಾಪತ್ತೆಯಾಗಿರುವವರ ಪೈಕಿ ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳು ಸೇರಿದಂತೆ ದೊಡ್ಡ ಸಂಖ್ಯೆಯ ಭಾರತೀಯ ಪ್ರವಾಸಿಗರು ಸೇರಿದ್ದಾರೆ. ಹೀಗಾಗಿ, ಭಾರತ ರಾಯಭಾರ ಕಚೇರಿಯು ನೇಪಾಳ ಹಾಗೂ ಚೀನಾದೊಂದಿಗೆ ನಿಕಟ ಸಂಪರ್ಕದಲ್ಲಿದೆ. ದೇಶದ ಪ್ರಜೆಗಳನ್ನು ರಕ್ಷಿಸಲು ಹಾಗೂ ಪರಿಹಾರ ಒದಗಿಸಲು ಚೀನಾ ಮತ್ತು ನೇಪಾಳ ನಡೆಸುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯೊಂದಿಗೆ ಭಾರತದ ಅಧಿಕಾರಿಗಳು ನಿಕಟ ಸಂಪರ್ಕದಲ್ಲಿದ್ದಾರೆ.
"ನೇಪಾಳಕ್ಕೆ ಸಾಧ್ಯವಿರುವ ಎಲ್ಲ ಬಗೆಯ ಮಾನವೀಯ ನೆರವು ಒದಗಿಸಲು ಭಾರತ ಸಿದ್ಧವಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯೊಂದಿಗೆ ನಮ್ಮ ತಂಡಗಳು ನಿಕಟ ಸಂಪರ್ಕದಲ್ಲಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೇಪಾಳದ ಪ್ರಧಾನಿ ಬಲೇಂದ್ರ ಶಾಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನೇಪಾಳವನ್ನು ಅಪ್ಪಳಿಸಿರುವ ಪ್ರವಾಹದಲ್ಲಿ ತಮ್ಮ ಜೀವ ಕಳೆದಕೊಂಡಿರುವವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. "ಈ ಕಷ್ಟಕರ ಸಮಯದಲ್ಲಿ ಭಾರತೀಯರು ನೇಪಾಳದ ಸಹೋದರರು ಹಾಗೂ ಸಹೋದರರಿಯರೊಂದಿಗೆ ದೃಢವಾಗಿ ನಿಲ್ಲಲಿದ್ದಾರೆ" ಎಂದು ಅವರು ಅಭಯ ನೀಡಿದ್ದಾರೆ.
ಕಷ್ಟಕರ ಸಮಯದಲ್ಲಿ ಬೆಂಬಲ ಹಾಗೂ ನೆರವು ನೀಡುವುದಾಗಿ ಘೋಷಿಸಿರುವ ಭಾರತದ ಕ್ರಮವನ್ನು ನೇಪಾಳ ಪ್ರಧಾನಿ ಬಲೇಂದ್ರ ಶಾ ಅಭಿನಂದಿಸಿದ್ದಾರೆ.
"ಈ ಬೆಂಬಲದ ಘೋಷಣೆ ಎರಡು ರಾಷ್ಟ್ರಗಳ ನಡುವಿನ ದೀರ್ಘಕಾಲದ ಸ್ನೇಹ ಬಾಂಧವ್ಯದ ಪ್ರತಿಬಿಂಬವಾಗಿದೆ. ಈ ಬೆಂಬಲಕ್ಕೆ ನಮ್ಮ ಗೌರವಗಳು" ಎಂದು ಬಲೇಂದ್ರ ಶಾ ಎಕ್ಸ ನಲ್ಲಿ ಪೋಸ್ಟ್ ಮಾಡಿದ್ದಾರೆ.

