ನವದೆಹಲಿ: ರಾಜಸ್ಥಾನ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಅವರನ್ನು ಕೂಡಲೇ ಪದಚ್ಯುತಗೊಳಿಸಬೇಕು ಎಂದು ಕೋರಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರಿಗೆ ಪತ್ರಗಳನ್ನು ಬರೆದಿದ್ದಾರೆ.
ಸುಪ್ರೀಂ ಕೋರ್ಟ್ಗೆ ಬಡ್ತಿ ಪಡೆಯುವ ಮುನ್ನ ರಾಜಸ್ಥಾನ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿದ್ದ ಸಂದೀಪ್ ಮೆಹ್ತಾ ಅವರು, 'ಶರ್ಮಾ ಅವರು ಸಂಸ್ಥೆಯ ನಾಯಕನಿಗೆ ತಕ್ಕುದಲ್ಲದ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ ಮತ್ತು ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದರೂ ಹುದ್ದೆಯಲ್ಲಿ ಮುಂದುವರಿದಿದ್ದಾರೆ' ಎಂದು ಆರೋಪಿಸಿದ್ದಾರೆ.
ಆಗಸ್ಟ್ 2, 10 ಮತ್ತು 17ರಂದು ಬರೆದ ಪತ್ರಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂನ ಇತರ ಸದಸ್ಯರು ಹಾಗೂ ರಾಷ್ಟ್ರಪತಿ ಅವರಿಗೂ ರವಾನಿಸಿದ್ದಾರೆ.
ಮೊದಲ ಪತ್ರದಲ್ಲಿ, 'ನ್ಯಾಯಮೂರ್ತಿ ಶರ್ಮಾ ಅವರ ಕರ್ತವ್ಯ ನಿರ್ವಹಣೆ ಕುರಿತು ದೂರುಗಳು ದಾಖಲಾಗಿವೆ. ಸಿಜೆಐ ಜೊತೆಗೆ ನಿಕಟವಾದ ಸಂಪರ್ಕವಿದೆ ಎಂದು ಹೇಳಿಕೊಳ್ಳುತ್ತಾ, ವರ್ಗಾವಣೆ ಮತ್ತಿತರ ಪ್ರತೀಕಾರದ ಕ್ರಮಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೈಕೋರ್ಟ್ನ ಹಲವು ನ್ಯಾಯಮೂರ್ತಿಗಳು ದೂರಿದ್ದಾರೆ' ಎಂದು ಹೇಳಿದ್ದಾರೆ.
ಆಗಸ್ಟ್ 10ರ ಪತ್ರದಲ್ಲಿ, ಕೆಲವು ವಕೀಲರು ಅಥವಾ ಕಕ್ಷಿದಾರರ ಪರವಾಗಿ ಪಕ್ಷಪಾತ ಮಾಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಆಗಸ್ಟ್ 17ರ ಪತ್ರದಲ್ಲಿ, 'ಶರ್ಮಾ ಅವರು ಸುದೀರ್ಘ 10 ತಿಂಗಳು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಮುಂದುವರಿದಿರುವುದು ಏಕೆ' ಎಂದು ಪ್ರಶ್ನಿಸಿದ್ದಾರೆ.

