ನವದೆಹಲಿ: ಇತ್ತೀಚೆಗೆ ದೆಹಲಿ ಮೂಲದ ಕುಟುಂಬವೊಂದು ಉದಯಪುರಕ್ಕೆ ಭೇಟಿ ನೀಡಿತ್ತು. ಈ ವೇಳೆ ಐಷಾರಾಮಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ ಕುಟುಂಬ ₹5.74 ಲಕ್ಷ ಬಿಲ್ ಪಾವತಿಸದೆ, ಹೊರಟು ಹೋಗಿದೆ ಎಂದು ಹೋಟೆಲ್ನ ವ್ಯವಸ್ಥಾಪಕರು ಆರೋಪಿಸಿದ್ದಾರೆ.
ಆಗಸ್ಟ್ 12 ರಂದು ಟ್ರಾವೆಲ್ ಏಜೆನ್ಸಿಯೊಂದು ಇಮೇಲ್ ಮೂಲಕ ಅನುರಾಗ್ ಯಾದವ್ ಎಂಬುವವರಿಗೆ ಕೊಠಡಿಯೊಂದನ್ನು ಬುಕಿಂಗ್ ಮಾಡಿಸಿತ್ತು.
ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆಗಮಿಸಿದ್ದ ಅವರು ಆಗಸ್ಟ್ 14 ರಿಂದ 23 ರವರೆಗೆ ಹೋಟೆಲ್ನಲ್ಲಿಯೇ ತಂಗಿದ್ದರು.
ವಾರಕ್ಕೂ ಹೆಚ್ಚು ಕಾಲ ಹೋಟೆಲ್ನಲ್ಲಿದ್ದ ಅವರು ಮಧ್ಯಾಹ್ನ, ರಾತ್ರಿ ಊಟ ಸೇರಿದಂತೆ, ವಿವಿಧ ಸೇವೆಗಳನ್ನು ಪಡೆದುಕೊಂಡಿದ್ದರು. ಆಗಸ್ಟ್ 24ರಂದು ಹೋಟೆಲ್ನಿಂದ ಹೊರಡುವಾಗ ಎಲ್ಲಾ ವೆಚ್ಚಗಳು ಸೇರಿ ಒಟ್ಟು ₹5.74 ಲಕ್ಷ ಬಿಲ್ ಪಾವತಿ ಮಾಡುವಂತೆ ಹೋಟೆಲ್ ಸಿಬ್ಬಂದಿ ಕೇಳಿದ್ದಾರೆ.
ಇದಕ್ಕೆ ಒಪ್ಪದ ಅನುರಾಗ್, ಹೋಟೆಲ್ನಲ್ಲಿ ಟಿಕೆಟ್ ಬುಕಿಂಗ್ ಮಾಡಿಕೊಟ್ಟಿದ್ದ ಟ್ರಾವೆಲ್ ಏಜೆನ್ಸಿಯು ಬಿಲ್ ಪಾವತಿಸುವುದಾಗಿ ಹೇಳಿದ್ದಾರೆ. ಬಳಿಕ ಹೋಟೆಲ್ನ ವ್ಯವಸ್ಥಾಪಕ ರವೀಂದ್ರ ಸಿಂಗ್ ಅವರು ಆ ಏಜೆನ್ಸಿಯನ್ನು ಸಂಪರ್ಕಿಸಿ ವಿಚಾರಿಸಿದಾಗ, ಯಾದವ್ ಅವರೊಂದಿಗೆ ಅಂತಹ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ ಎಂಬುದು ಗೊತ್ತಾಗಿದೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಟ್ರಾವೆಲಿಂಗ್ ಏಜೆನ್ಸಿಯೊಂದಿಗೆ ಸೇರಿ ವಂಚಿಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
.

