ನವದೆಹಲಿ: ಕಳೆದ ವಾರ ದಿಢೀರ್ ಪ್ರವಾಹದಿಂದ ಜರ್ಜರಿತವಾಗಿರುವ ನೇಪಾಳಕ್ಕೆ 68.5 ಟನ್ ಪರಿಹಾರ ಸಾಮಾಗ್ರಿಗಳು ಹಾಗೂ ತಾಂತ್ರಿಕ ಪರಿಣಿತರ ತಂಡಗಳನ್ನು ಮತ್ತು ಸಲಕಣೆಗಳನ್ನು ಭಾರತವು ರವಾನಿಸಿದೆೆ.
11 ಟನ್ ಪರಿಹಾರ ಹೊತ್ತು ತಂದಿರುವ ನಾಲ್ಕನೇ ಭಾರತೀಯ ವಿಮಾನವು ರವಿವಾರ ನೇಪಾಳದ ಕಠ್ಮಂಡುವಿಗೆ ಬಂದಿದಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ನೇಪಾಳದ ಪ್ರವಾಹಪೀಡಿತ ಪ್ರದೇಶಗಳಿಗೆ ರಕ್ಷಣಾ ಕಾರ್ಯಾಚರಣೆಯ ಸಾಮಾಗ್ರಿಗಳು, ಹೊದಿಕೆಗಳು, ಸ್ಲೀಪಿಂಗ್ ಬ್ಯಾಗ್ಗಳು, ಟರ್ಪಾಲುಗಳು, ಪ್ಲಾಸ್ಟಿಕ್ ಹಾಸುಗಳು ಹಾಗೂ ನೈರ್ಮಲ್ಯ ಕಿಟ್ಗಳನ್ನು ಭಾರತ ಕಳುಹಿಸಿಕೊಟ್ಟಿದೆ. ಜೊತೆಗೆ ನೇಪಾಳದಲ್ಲಿ ದುರಂತದ ಬಳಿಕ ಸುರಂಗಗಳಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗಾಗಿ ಕೊಳವೆ ಮಾರ್ಗ ತಂತ್ರಜ್ಞರ ತಂಡ ಹಾಗೂ ಡಿಎನ್ಎ ವಿಶ್ಲೇಷಕರ ತಂಡವನ್ನು ಕೂಡಾ ರವಾನಿಸಿದೆ.
ವೈದ್ಯರು, ಪ್ಯಾರಾಮೆಡಿಕ್ಸ್ ಹಾಗೂ ಸುರಂಗಮಾರ್ಗ (ಟನೆಲ್) ಇಂಜಿನಿಯರ್ಗಳನ್ನು ಒಳಗೊಂಡ 11 ಸದಸ್ಯರ ಭಾರತೀಯ ತಂತ್ರಜ್ಞರ ತಂಡ ಶುಕ್ರವಾರ ಕಠ್ಮಂಡು ತಲುಪಿದೆ. ಶನಿವಾರ ಪ್ರವಾಹಪೀಡಿತ ನುವಾಕೋಟ್ ಜಿಲ್ಲೆಯ ತ್ರಿಶೂಲಿ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿತೆಂದು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಹೇಳಿಕೆ ತಿಳಿಸಿದೆ.
ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆಗಾಗಿ ಡಿಎನ್ಎ ಪರೀಕ್ಷೆ, ಫಾರೆನ್ಸಿಕ್ ಪರೀಕ್ಷೆ ಮತ್ತಿತರ ವಿಶೇಷ ಕಾರ್ಯಾಚರಣೆಗಳಿಗಾಗಿ ವಿದೇಶಿ ನೆರವನ್ನು ನೇಪಾಳ ಕೋರಿತ್ತು. ಅದಕ್ಕೆ ಸ್ಪಂದಿಸಿರುವ ಭಾರತವು ನೇಪಾಳಕ್ಕೆ ಫಾರೆನ್ಸಿಕ್ ತಜ್ಞರು ಹಾಗೂ ಡಿಎನ್ಎ ವಿಶ್ಲೇಷಣೆಯ ಸಲಕರಣೆಗಳನ್ನು ಕಳುಹಿಸಿಕೊಟ್ಟಿದೆ.
ಪ್ರವಾಹದಿಂದ ಸಂಪರ್ಕ ಕಡಿದುಕೊಂಡಿರುವ ಪ್ರದೇಶಗಳಲ್ಲಿ ಸಾರಿಗೆ ಸಂಚಾರವನ್ನು ಮರುಸ್ಥಾಪಿಸುವುದಕ್ಕೆ ನೆರವಾಗುವ ಉದ್ದೇಶದಿಂದ ಭಾರತವು ತಾತ್ಕಾಲಿಕ ಸೇತುವೆಗಳ ನಿರ್ಮಾಣಕ್ಕಾಗಿ ಸಲಕರಣೆಗಳನ್ನು ಕೂಡಾ ರವಾನಿಸಿದೆ. ಈ ಸೇತುವೆಗಳನ್ನು ತ್ವರಿತವಾಗಿ ಜೋಡಿಸಬಹುದಾಗಿದ್ದು, ಅವುಗಳ ಸ್ಥಾಪನೆಗೆ ಭಾರೀ ಯಂತ್ರಗಳು ಹಾಗೂ ವಿಶೇಷ ಸಲಕರಣೆಗಳ ಅಗತ್ಯವಿರುವುದಿಲ್ಲ. ಈವರೆಗೆ ನೇಪಾಳದ ಭದ್ರತಾಪಡೆಗಳು ದೇಶದ ವಿವಿಧ ಜಲವಿದ್ಯುತ್ ಯೋಜನೆ ಪ್ರದೇಶಗಳಲ್ಲಿನ ಸುರಂಗಗಳಿಂದ 191 ಮಂದಿಯನ್ನು ರಕ್ಷಿಸಿದ್ದಾರೆ. ಆದಾಗ್ಯೂ ಇನ್ನೂ ಅನೇಕ ಕಾರ್ಮಿಕರು ಸುರಂಗಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗಾಗಿ ನೇಪಾಳ ಸರಕಾರವು ಭಾರತದಿಂದ ಹೆಚ್ಚುವರಿ ನೆರವನ್ನು ಕೋರಿದೆ.

