ನವದೆಹಲಿ: ಭಾರತದಲ್ಲಿ 15 ರಿಂದ 29 ವರ್ಷದೊಳಗಿನ ಸುಮಾರು 8.7 ಕೋಟಿ ಯುವಕರು ಯಾವುದೇ ಶಿಕ್ಷಣ, ಉದ್ಯೋಗ ಅಥವಾ ವೃತ್ತಿಪರ ತರಬೇತಿಯನ್ನು ಪಡೆಯದೆ ಉಳಿದಿದ್ದಾರೆ ಎಂದು ನೀತಿ ಆಯೋಗ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
'ವಿಕಸಿತ ಭಾರತ್@2047' ಉದ್ಯೋಗ ಮತ್ತು ಕೌಶಲ್ಯ ವರದಿಯಲ್ಲಿ ನೀತಿ ಆಯೋಗವು ಈ ಆತಂಕಕಾರಿ ಅಂಕಿಅಂಶವನ್ನು ಹೊರಹಾಕಿದೆ.
ದೇಶದಲ್ಲಿ ಯುವಜನತೆಗೆ ರಿಯಾಯಿತಿ ದರದಲ್ಲಿ ತರಬೇತಿ ಹಾಗೂ ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
ಪದವಿ ಮುಗಿಸಿದವರಲ್ಲಿ ಕೇವಲ ಶೇಕಡಾ 8.25 ರಷ್ಟು ಯುವಕರು ಮಾತ್ರ ತಾವು ಪಡೆದ ಶಿಕ್ಷಣಕ್ಕೆ ಸೂಕ್ತವಾದ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸೂಕ್ತ ಪ್ರಾಯೋಗಿಕ ತರಬೇತಿ ಮತ್ತು ಉದ್ಯಮ ರಂಗಕ್ಕೆ ಅಗತ್ಯವಿರುವ ಕೌಶಲ್ಯಗಳ ಕೊರತೆಯಿಂದಾಗಿ ಶಿಕ್ಷಣ ಪಡೆದ ಯುವಕರಿಗೂ ಕೆಲಸ ಸಿಗುವುದು ಕಷ್ಟವಾಗುತ್ತಿದೆ.
ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಹಾಗೂ ಬೋಧನಾ ವೆಚ್ಚಗಳಿಂದಾಗಿ ಹೆಚ್ಚುವರಿ ಹಣ ನೀಡಿ ಕೌಶಲ್ಯ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಿಕ್ಕಿದ ಕಡಿಮೆ ವೇತನದ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ ಅಥವಾ ಕೆಲಸವಿಲ್ಲದೆ ಉಳಿಯುತ್ತಿದ್ದಾರೆ.
2014-15 ರಿಂದ ಈವರೆಗೆ ದೇಶದಾದ್ಯಂತ 7.67 ಕೋಟಿಗೂ ಹೆಚ್ಚು ಜನರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಲಾಗಿದೆ ಎಂದು ವರದಿ ಹೇಳಿದೆ.
ಯುವಜನತೆಗೆ ರಿಯಾಯಿತಿ ದರದ ತರಬೇತಿಗಳು ಹಾಗೂ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಉದ್ಯೋಗ ತರಬೇತಿ ನೀಡಿದರೆ ಮಾತ್ರ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಾಧ್ಯ ಎಂದು ನೀತಿ ಆಯೋಗ ಸ್ಪಷ್ಟಪಡಿಸಿದೆ.

