ನವದೆಹಲಿ: ಜು.20ರಂದು ಸಂಸತ್ಗೆ ಜಾಥಾದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆಗಳ ನಡುವೆಯೇ ಲೋಕಸಭೆಯು ಶುಕ್ರವಾರ 'ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ, 2026' ಅನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿತು.
ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಸಂಸದ ದಿಲೀಪ್ ಸೈಕಿಯಾ ಅವರ ಅಧ್ಯಕ್ಷತೆಯಲ್ಲಿ ಸದನ ಮರುಸಮಾವೇಶಗೊಂಡಾಗ ಈ ಮಸೂದೆಯನ್ನು ಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲಾಯಿತು. ಈ ವೇಳೆ ಪ್ರತಿಪಕ್ಷಗಳ ಸದಸ್ಯರು ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಬರಬೇಕೆಂದು ಆಗ್ರಹಿಸಿ ಸದನದ ಅಂಗಳದಲ್ಲಿ ಸೇರಿ ಘೋಷಣೆಗಳನ್ನು ಕೂಗಿದರು. ಈ ಗದ್ದಲದ ನಡುವೆಯೇ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಚರ್ಚೆಯಲ್ಲಿ ಭಾಗವಹಿಸಲು ವಿರೋಧ ಪಕ್ಷಗಳು ನಿರಾಕರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಸರಕಾರವು ಈ ಪ್ರಮುಖ ಮಸೂದೆಯ ಮೇಲೆ ಚರ್ಚೆಯನ್ನು ಬಯಸಿತ್ತು. ಇದು ದುರದೃಷ್ಟಕರ. ದಯವಿಟ್ಟು ಭವಿಷ್ಯದಲ್ಲಿ ಇದನ್ನು ಪುನರಾವರ್ತಿಸಬೇಡಿ. ನಿಮ್ಮನ್ನು ಸಂಸತ್ತಿಗೆ ಕಳುಹಿಸಿದ ಜನರು ನಿಮ್ಮಿಂದ ಉತ್ತರಗಳನ್ನು ಕೇಳುತ್ತಾರೆ ಎಂದು ಹೇಳಿದರು. ಗದ್ದಲವೆಬ್ಬಿಸುವ ಬದಲು ಮುಂದಿನ ಶಾಸನಗಳ ಮೇಲಿನ ಚರ್ಚೆಗಳಲ್ಲಿ ಭಾಗವಹಿಸುವಂತೆ ಪ್ರತಿಪಕ್ಷಗಳ ಸದಸ್ಯರನ್ನು ಅವರು ಆಗ್ರಹಿಸಿದರು.
ಮಸೂದೆ ಅಂಗೀಕಾರಗೊಂಡ ಬೆನ್ನಲ್ಲೇ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಜನನ-ಮರಣಗಳ ಸಕಾಲಿಕ ವರದಿಯನ್ನು ಪ್ರೋತ್ಸಾಹಿಸಲು 'ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ 1969' ರ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಈ ಮಸೂದೆಯು ಉದ್ದೇಶಿಸಿದೆ.
ಮಸೂದೆಯು ಜನನ ಅಥವಾ ಮರಣ ಸಂಭವಿಸಿದ ಎರಡು ವರ್ಷಗಳ ನಂತರ ನೋಂದಣಿ ಮಾಡಿಕೊಳ್ಳುವುದಾದರೆ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಆದೇಶವನ್ನು ಕಡ್ಡಾಯಗೊಳಿಸುವ ಮೂಲಕ ವಿಳಂಬಿತ ನೋಂದಣಿಯನ್ನು ಇನ್ನಷ್ಟು ಕಠಿಣಗೊಳಿಸಿದೆ.
ಚಾಲ್ತಿಯಲ್ಲಿರುವ ಕಾನೂನಿನ ಪ್ರಕಾರ, ಒಂದು ವರ್ಷಕ್ಕಿಂತ ಹೆಚ್ಚು ವಿಳಂಬಿತ ನೋಂದಣಿಗಳಿಗೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಅಥವಾ ಅಧಿಕೃತ ಕಾರ್ಯಕಾರಿ ಮ್ಯಾಜಿಸ್ಟ್ರೇಟ್ ಆದೇಶದ ಅಗತ್ಯವಿದೆ. ತಿದ್ದುಪಡಿ ಮಾಡಿದ ಕಾನೂನಿನ ಅಡಿಯಲ್ಲಿಯೂ ಎರಡು ವರ್ಷಗಳವರೆಗಿನ ವಿಳಂಬಕ್ಕೆ ಈ ನಿಬಂಧನೆ ಮುಂದುವರಿಯುತ್ತದೆ.
ಲೋಕಸಭೆಯಲ್ಲಿ ಈ ಮಸೂದೆಯ ಅಂಗೀಕಾರದೊಂದಿಗೆ, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಡೆಯುತ್ತಿರುವ ಗದ್ದಲಗಳ ನಡುವೆಯೇ ಸರಕಾರವು ಇನ್ನೊಂದು ಶಾಸನವನ್ನು ಅಂಗೀಕರಿಸಿದಂತಾಗಿದೆ.
ಪ್ರಸ್ತುತ ಅಧಿವೇಶನದಲ್ಲಿ ಇದುವರೆಗೆ ಎರಡು ಮಸೂದೆಗಳು - 'ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆ) ತಿದ್ದುಪಡಿ ಮಸೂದೆ, 2026' ಮತ್ತು 'ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಮಸೂದೆ, 2026' ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿವೆ.
'ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ, 2026' ಈಗ ರಾಜ್ಯಸಭೆಯ ಅನುಮೋದನೆಗೆ ಕಾಯುತ್ತಿದೆ.

