ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಅಂತ್ಯಗೊಳ್ಳಲು ಕೇವಲ ನಾಲ್ಕು ದಿನಗಳು ಬಾಕಿ ಇವೆ. ಆದರೆ, ಕಳೆದ 15 ದಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಡೆದ ಕಲಾಪಗಳಲ್ಲಿ ಯಾವುದೇ ಅರ್ಥಪೂರ್ಣ ಚರ್ಚೆ ನಡೆದಿಲ್ಲ.
ಸಾರ್ವಜನಿಕ ಪರೀಕ್ಷಾ (ಅಕ್ರಮಗಳ ತಡೆ) ತಿದ್ದುಪಡಿ ಮಸೂದೆಯ ಬಗ್ಗೆ ಚರ್ಚೆ ನಡೆಸಲಾಗಿದೆ.
ಇದರ ಹೊರತಾಗಿ ಪ್ರತಿಭಟನೆನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳು ಪಟ್ಟುಹಿಡಿದ ಕಾರಣ ಅರ್ಥಪೂರ್ಣ ಚರ್ಚೆ ನಡೆಸದೆ ಕೆಲ ಮಸೂದೆಗಳಿಗೆ ಗದ್ದಲದ ನಡುವೆಯೇ ಅಂಗೀಕಾರ ನೀಡಲಾಗಿದೆ.
ಅಮಿತ್ ಶಾ ಸ್ಪಷ್ಟನೆಗೆ ವಿಪಕ್ಷಗಳು ಪಟ್ಟು ಹಿಡಿದರೆ, ಯಾವ ಸಚಿವರು ಸದನಕ್ಕೆ ಬರಬೇಕು, ಯಾರು ಮಾತನಾಡಬೇಕು ಎನ್ನುವುದನ್ನು ವಿರೋಧ ಪಕ್ಷಗಳು ನಿರ್ಧರಿಸುವಂತಿಲ್ಲ ಎಂದು ಸರ್ಕಾರವು ತಿರುಗೇಟು ನೀಡಿತ್ತು.
ಕಳೆದ 15 ದಿನಗಳ ಕಲಾಪದಲ್ಲಿ ಲೋಕಸಭೆಯು ನಿಗದಿಪಡಿಸಿದ 90 ಗಂಟೆಗಳಲ್ಲಿ 15:36 ಗಂಟೆ ಮಾತ್ರ ಕಾರ್ಯನಿರ್ವಹಿಸಿದೆ. ಈ ಅವಧಿಯಲ್ಲಿ ಎಂಟು ಮಸೂದೆಗಳನ್ನು ಅಂಗೀಕರಿಸಿದೆ. ಆಗಸ್ಟ್ 3 ಮತ್ತು 7ರ ನಡುವೆ ಕೆಳಮನೆಯು ಕೇವಲ 103 ನಿಮಿಷ ಕಾರ್ಯನಿರ್ವಹಿಸಿದೆ. ರಾಜ್ಯಸಭೆಯು 15 ಕಲಾಪಗಳಲ್ಲಿ 24.21 ಗಂಟೆ ಕಾರ್ಯನಿರ್ವಹಿಸಿದೆ. ಈ ಅವಧಿಯಲ್ಲಿ ಆರು ಮಸೂದೆಗಳನ್ನು ಅಂಗೀಕರಿಸಿದೆ. ಆಗಸ್ಟ್ 3 ಮತ್ತು 7ರ ನಡುವೆ ಮೇಲ್ಮನೆಯು 10:56 ಗಂಟೆ ಕಾರ್ಯನಿರ್ವಹಿಸಿದೆ.
ಸೋಮವಾರ ಲೋಕಸಭೆಯಲ್ಲಿ ನಾಲ್ಕು ಮತ್ತು ರಾಜ್ಯಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಲು ಸರ್ಕಾರ ಪಟ್ಟಿ ಮಾಡಿದೆ.
ಕಳೆದ ವಾರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಹಾಗೂ ಕ್ಷೇತ್ರಪುನರ್ ವಿಂಗಡಣೆ, ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಲು ಮನವಿ ಮಾಡಿದ್ದರು. ಆದರೆ ಈ ಕಾಯ್ದೆಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದರು.
ಕೆ.ಸಿ.ವೇಣುಗೋಪಾಲ್ ಎಐಸಿಸಿ ಪ್ರಧಾನ ಕಾರ್ಯದರ್ಶಿಕೇಂದ್ರ ಸರ್ಕಾರವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡನೆ ಮಾಡಿದರೆ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಲಿವೆ
ಇಂದಲ್ಲಾ ನಾಳೆ ಉತ್ತರ ನೀಡಲೇಬೇಕು: ರಾಹುಲ್
'ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳ ಮೇಲೆ ಲಾಠಿ ಪೆಲೆಟ್ ಗನ್ ಬಳಕೆ ಮಾಡಲಾಗಿದೆ. ಆದರೂ ಅಮಿತ್ ಶಾ ಒಂದೇ ಒಂದು ಮಾತನಾಡಿಲ್ಲ. ಇಂದು ಅಥವಾ ನಾಳೆ ನೀವು ಉತ್ತರ ನೀಡಲೇಬೇಕು' ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಹೇಳಿದ್ದಾರೆ. 'ವಿದ್ಯಾರ್ಥಿಗಳು ಈ ದೇಶದ ಬೆಳಕು. ನಾನು ಅವರೊಂದಿಗೆ ನಿಲ್ಲುವೆ' ಎಂದಿದ್ದಾರೆ. 'ಅಮಿತ್ ಶಾ ಅವರು ಒಂದೇ ಒಂದು ಪದ ಮಾತನಾಡಿಲ್ಲ. ಮೋದಿ ಅವರು ಕ್ಷಮೆ ಕೇಳುವ ಬದಲಾಗಿ ಕ್ಷಮಾಪಣೆ ನೀಡಿದ್ದಾರೆ. ಹೊಣೆಗಾರಿಕೆ ವಹಿಸಿಕೊಳ್ಳಲು ಆಗ್ರಹಿಸುವುದನ್ನು ನಿಲ್ಲಿಸುತ್ತೇವೆ ಎಂದು ಭಾವಿಸಬೇಡಿ' ಎಂದು ಎಚ್ಚರಿಸಿದ್ದಾರೆ.

