ಭುವನೇಶ್ವರ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಜೆನ್ ಝೀಗಳನ್ನು ದಾರಿ ತಪ್ಪಿಸುವ ಯತ್ನಗಳು ನಡೆದಿದ್ದವು. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆ ಎಂದು ಬಿಜೆಪಿ ಹಿರಿಯ ನಾಯಕ, ಸಂಸದ ಧರ್ಮೇಂದ್ರ ಪ್ರಧಾನ್ ತಿಳಿಸಿದರು.
ಜಿ.ಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು ತಮ್ಮ ರಾಜೀನಾಮೆ ಕುರಿತು ಮೊದಲ ಬಾರಿಗೆ ಮೌನ ಮುರಿದರು. 'ಜೆನ್ ಝೀಗಳು ನಮ್ಮ ಮಕ್ಕಳು. ಕೆಲವರು ಅವರನ್ನು ದಾರಿ ತಪ್ಪಿಸುವ ಯತ್ನ ಮಾಡಿದರು. ಪ್ರತಿ ವರ್ಷ ಭಾರತದಲ್ಲಿ 2 ಕೋಟಿ ಮಕ್ಕಳು ಜನಿಸುತ್ತಾರೆ. ಕಳೆದ 10 ವರ್ಷಗಳಲ್ಲಿ 20 ಕೋಟಿ ಮಕ್ಕಳು ಜನಿಸಿದ್ದಾರೆ. ಅವರೆಲ್ಲರಿಗೂ ಆಕಾಂಕ್ಷೆಗಳು ಇವೆ. ಅವರೆಲ್ಲ ಭಾರತವನ್ನು 'ವಿಶ್ವಗುರು'ವಾಗಿ ಮಾಡಲಿದ್ದಾರೆ. ಸಚಿವ ಸ್ಥಾನ ನನಗೆ ಮುಖ್ಯವಲ್ಲ' ಎಂದು ಹೇಳಿದರು.
ಪ್ರಧಾನ್ ಅವರು ಜುಲೈ 25ರಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರೈಡಾಖೋಲ್ನಲ್ಲಿ ಮತ್ತೊಂದು ಸಭೆಯಲ್ಲಿ ಭಾಗಿಯಾಗಿದ್ದ ಅವರು, ಒಡಿಶಾ ಮಾಜಿ ಮುಖ್ಯಮಂತ್ರಿ, ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಡಿ ಯುವ ಘಟಕ ಮತ್ತು ವಿದ್ಯಾರ್ಥಿಗಳು ವಿಮಾನ ನಿಲ್ದಾಣದ ಸಮೀಪ ನಡೆಸಿದ 'ಗೋ ಬ್ಯಾಕ್' ಪ್ರತಿಭಟನೆಯನ್ನು ಉಲ್ಲೇಖಿಸಿ, 'ನಾನು ರೈತರ ಮಗ. ನೀವು 'ವಾಪಸ್ ಹೋಗಿ' ಎಂದು ಹೇಳಿದರೆ ನಾನು ವಾಪಸ್ ಬರುತ್ತೇನೆ' ಎಂದು ಹೇಳಿದರು.

