ರಾಂಚಿ: ಜಾರ್ಖಂಡ್ ಲೋಕ ಸೇವಾ ಆಯೋಗ(ಜೆಪಿಇಎಸ್ಸಿ) ನಡೆಸಿದ ನೇಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ನಡುವೆ ಆಯೋಗದ ಮೂವರು ಸದಸ್ಯರು ಭಾನುವಾರ ರಾಜೀನಾಮೆ ನೀಡಿದ್ದಾರೆ.
ಆಯೋಗದ ಸದಸ್ಯರಾದ ಅಜೀತಾ ಭಟ್ಟಾಚಾರ್ಯ, ಅನಿಮ ಹಂಸದ ಮತ್ತು ಜಮಾಲ್ ಅಹ್ಮದ್ ಅವರ ರಾಜೀನಾಮೆಯನ್ನು ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅಂಗೀಕರಿಸಿದ್ದಾರೆ ಎಂದು ಲೋಕಸಭವನದ ಪ್ರಕಟಣೆ ತಿಳಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೇಮಕ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಸಮನ್ಸ್ ಜಾರಿ ಮಾಡಿದ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜುಲೈ 22ರಂದು ಜೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಎಲ್ ಖಿಯಾಂಗ್ಟೆ ರಾಜೀನಾಮೆ ನೀಡಿದ್ದರು.
ಜೆಪಿಎಸ್ಸಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಈವರೆಗೆ 19 ಮಂದಿಯ ಬಂಧನವಾಗಿದೆ. ಖಿಯಾಂಗ್ಟೆ ಅವರನ್ನು 4 ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ.
ನೇಮಕ ಪರೀಕ್ಷೆ ರದ್ದು
ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಜಾರ್ಖಂಡ್ ಸರ್ಕಾರವು ಜೆಪಿಎಸ್ಸಿ ನೇಮಕ ಪರೀಕ್ಷೆಯನ್ನು ರದ್ದು ಮಾಡಿದೆ. ಆದರೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಸೂಚನೆಯ ಮೇರೆಗೆ, 14ನೇ ಜೆಪಿಎಸ್ಸಿ ಮತ್ತು 2023-25ರ ಬ್ಯಾಕ್ಲಾಗ್ ನೇಮಕಾತಿಗಳಿಗೆ ಸಂಬಂಧಿಸಿದ ಅಕ್ರಮಗಳ ಕುರಿತು ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಜಾರ್ಖಂಡ್ ಸಚಿವ ಸುದಿವ್ಯ ಕುಮಾರ್ ಸೋನು ತಿಳಿಸಿದ್ದಾರೆ.
'ಅಪರಾಧದ ಅಂಶಗಳ ಕುರಿತು ಸಿಐಡಿ ತನಿಖೆ ನಡೆಸಲಿದೆ; ಜೊತೆಗೆ, ಆರ್ಥಿಕ ಪರಿಣಾಮಗಳು ಮತ್ತು ಅಕ್ರಮ ಹಣಕಾಸು ವಹಿವಾಟುಗಳ ಸಾಕ್ಷ್ಯಗಳನ್ನು ಗಮನದಲ್ಲಿಟ್ಟುಕೊಂಡು ಜಾರಿ ನಿರ್ದೇಶನಾಲಯದ ತನಿಖೆಗೂ ಕೋರಲಾಗುವುದು. ಬಳಿಕ, ತ್ವರಿತಗತಿ ನ್ಯಾಯಾಲಯವನ್ನು ರಚಿಸಿ ಆರೋಪಿಗಳ ವಿರುದ್ಧ 90 ದಿನಗಳೊಳಗೆ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗುವುದು'ಎಂದು ಸೋನು ಹೇಳಿದ್ದಾರೆ.

