ನವದೆಹಲಿ: ರಾಷ್ಟ್ರಗೀತೆಗೆ ಪ್ರಸ್ತುತ ನೀಡಲಾಗಿರುವ ಕಾನೂನು ರಕ್ಷಣೆಯನ್ನೇ ರಾಷ್ಟ್ರೀಯ ಗೀತೆ 'ವಂದೇ ಮಾತರಂ'ಗೂ ವಿಸ್ತರಿಸಿ, ಅದನ್ನು ಹಾಡುವುದಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ತಡೆಯುವುದನ್ನು ಅಪರಾಧವೆಂದು ಪರಿಗಣಿಸುವ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ(ಆ.11) ಅಂಕಿತ ಹಾಕಿದ್ದಾರೆ ಎಂದು ಸರ್ಕಾರಿ ಹೇಳಿಕೆ ತಿಳಿಸಿದೆ.
ರಾಷ್ಟ್ರಪತಿಯವರ ಅಂಕಿತದೊಂದಿಗೆ, ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ-2026 ಈಗ ಕಾನೂನಾಗಿ ಜಾರಿಗೆ ಬಂದಿದೆ.
ಲೋಕಸಭೆಯು ಜುಲೈ 30 ರಂದು ಈ ವಿಧೇಯಕವನ್ನು ಅಂಗೀಕರಿಸಿತ್ತು, ರಾಜ್ಯಸಭೆಯು ಒಂದು ದಿನ ಮುಂಚಿತವಾಗಿ ಇದಕ್ಕೆ ಒಪ್ಪಿಗೆ ನೀಡಿತ್ತು.
ಈ ಕಾನೂನು ವಂದೇ ಮಾತರಂಗೆ ರಾಷ್ಟ್ರಗೀತೆ 'ಜನ ಗಣ ಮನ'ದಷ್ಟೇ ಸಮಾನ ಸ್ಥಾನಮಾನವನ್ನು ನೀಡುತ್ತದೆ.
ಈ ಹಿಂದೆ, ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯಿದೆಯಲ್ಲಿ ಜನ ಗಣ ಮನ ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದನ್ನು ಅಥವಾ ಅಂತಹ ಗಾಯನದಲ್ಲಿ ನಿರತರಾಗಿರುವ ಸಭೆಗೆ ಅಡಚಣೆ ಉಂಟುಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗಿತ್ತು. ಈ ಅಪರಾಧಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿತ್ತು, ಹಾಗೆಯೇ ಎರಡನೇ ಮತ್ತು ನಂತರದ ಪ್ರತಿಯೊಂದು ಅಪರಾಧಕ್ಕೆ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.
ಹಿಂದಿನ ಕಾಯಿದೆಯು ವಂದೇ ಮಾತರಂಗೆ ಈ ರೀತಿಯ ರಕ್ಷಣೆಯನ್ನು ನೀಡಿರಲಿಲ್ಲ. ಹಾಗಾಗಿ, ಕಾಯಿದೆಯ ಸೆಕ್ಷನ್ 3ಕ್ಕೆ ತಿದ್ದುಪಡಿ ತಂದು ವಂದೇ ಮಾತರಂ ಗೀತೆಯನ್ನೂ ಇದರ ವ್ಯಾಪ್ತಿಗೆ ಸೇರಿಸಲಾಗಿದೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ಕೆಂಪುಕೋಟೆಯ ಮೇಲೆ ವಂದೇ ಮಾತರಂ ಹಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

