ನವದೆಹಲಿ: ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರ್ಬಳಕೆ ಆರೋಪವನ್ನು ಖಂಡಿಸಿ ಇಂಡಿಯಾ ಒಕ್ಕೂಟದ ಸಂಸದರು ಶುಕ್ರವಾರ (ಜುಲೈ 31) ಸಂಸತ್ ಭವನದ ಆವರಣದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ವೇಳೆ ಸಂಸದ ಪಪ್ಪು ಯಾದವ್ ಕಾವಿ ವಸ್ತ್ರ ಧರಿಸಿ ಅರ್ಚಕರ ವೇಷದಲ್ಲಿ ಕಾಣಿಸಿಕೊಂಡರು.
ಇದೇ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರ ಸಂಸದರು ಭಕ್ತರ ಪಾತ್ರದಲ್ಲಿ ಕಾಣಿಕೆ ಸಲ್ಲಿಸುವಂತೆ ಅಭಿನಯಿಸಿದರೆ, ಪಪ್ಪು ಯಾದವ್ ಆ ಕಾಣಿಕೆಯನ್ನು ಕಳವು ಮಾಡುವ ಸಾಂಕೇತಿಕ ದೃಶ್ಯವನ್ನು ಪ್ರದರ್ಶಿಸಿದರು.
ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಅಯೋಧ್ಯೆಯ ರಾಮಮಂದಿರದಲ್ಲಿನ ದೇಣಿಗೆ ಕಳವು ವಿರುದ್ಧ ಪ್ರತಿಭಟನೆ ನಡೆಸಲು ಪ್ರತಿಪಕ್ಷದ ಸಂಸದರು ಬೆಳಿಗ್ಗೆ 10:30ಕ್ಕೆ ಸಂಸತ್ ಭವನದ ಬಳಿ ಜಮಾಯಿಸಿದ್ದರು. ಈ ವೇಳೆ ಗೃಹ ಸಚಿವ ಅಮಿತ್ ಶಾ ಸಂಸತ್ತಿನಿಂದ ಏಕೆ ಗೈರಾಗಿದ್ದಾರೆ? ಎಂದು ಘೋಷಣೆಗಳನ್ನು ಕೂಗಿದ್ದಾರೆ. ಪರೀಕ್ಷಾ ಅಕ್ರಮಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮಸೂದೆಯ ಅಂಗೀಕಾರದ ಸಮಯದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಶಾ ಉಪಸ್ಥಿತರಿರಲಿಲ್ಲ.
ನಂತರ ವಿರೋಧ ಪಕ್ಷಗಳ ಸಂಸದರು ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ. ದೇವಾಲಯದ ಅರ್ಚಕನ ಪಾತ್ರ ವಹಿಸಿದ್ದ ಪಪ್ಪು ಯಾದವ್, ಕಾಣಿಕೆ ಪೆಟ್ಟಿಗೆಗಳನ್ನು ಇರಿಸಲಾಗಿದ್ದ ನೆಲದ ಮೇಲೆ ಬಂದು ಕುಳಿತರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಕೆಲವು ಸಂಸದರು ಭಕ್ತರ ಪಾತ್ರ ವಹಿಸಿ ಕಾಣಿಕೆ ಪೆಟ್ಟಿಗೆಗೆ ಹಣ ಹಾಕುತ್ತಾ, 'ಕಾಣಿಕೆ ಕಳವು ಎಲ್ಲಿ ಸಿಗುತ್ತದೆ? ಬಿಜೆಪಿ ಕಚೇರಿಯಲ್ಲಿ'ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಕೆಲವು ಸಂಸದರು ಪಪ್ಪು ಯಾದವ್ ಅವರು ಕಾಣಿಕೆ ಕಳ್ಳತನ ಮಾಡುವುದುನ್ನು ತಡೆಯಲು ಯತ್ನಿಸುವುದು ಹಾಗೂ ಆ ವೇಳೆ ಅವರು ಅದನ್ನು ಜೇಬಿಗೆ ಹಾಕಿಕೊಳ್ಳುವಂತೆ ನಟಿಸುವ ಪ್ರಸಂಗಗಳು ನಡೆದಿವೆ. ಒಂದು ಹಂತದಲ್ಲಿ, ಯಾದವ್ ಅವರು ರಾಹುಲ್ ಗಾಂಧಿ ಅವರಿಂದ ಹಣವನ್ನು ಕಸಿದುಕೊಂಡು ತಮ್ಮ ಜೇಬಿಗೆ ಹಾಕಿಕೊಂಡಿದ್ದು, ಎಲ್ಲರಲ್ಲೂ ನಗು ಉಕ್ಕಿಸಿತು.

