ಕೋಲ್ಕತ್ತ: ಕೆಲ ದಶಕಗಳಿಂದ ಗಂಗಾ ನದಿಯ ಮಧ್ಯ ಮತ್ತು ಮೇಲ್ಭಾಗದ ಪ್ರದೇಶಗಳಲ್ಲಿ ಕಾಣಸಿಗದಿದ್ದ 'ಹಿಲ್ಸಾ' ಮೀನುಗಳು ಈಗ ಅಲ್ಲಿ ಮತ್ತೆ ಪತ್ತೆಯಾಗಿವೆ. ನದಿ ಪುನಶ್ಚೇತನ ಮತ್ತು ಜಲಚರ ಜೀವವೈವಿಧ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
ಕೇಂದ್ರೀಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆ ಪ್ರಕಾರ, ನದಿಯ ಮೇಲ್ಭಾಗದ ಪ್ರದೇಶಗಳಿಂದ ಈ ಪ್ರಭೇದದ ಮೀನು ಕಣ್ಮರೆಯಾಗಿ ಸುಮಾರು ಮೂರು ದಶಕಗಳಾಗಿತ್ತು. ಇದೀಗ, ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿರುವ ಮಾರ್ಕಂಡೇಯ ಮಹಾದೇವ ದೇವಾಲಯದ ಸಮೀಪ ಒಟ್ಟು 740 ಗ್ರಾಂ ತೂಕದ ಎರಡು ಹಿಲ್ಸಾ ಮೀನುಗಳು ಪತ್ತೆಯಾಗಿವೆ.
ಐತಿಹಾಸಿಕವಾಗಿ, ಹಿಲ್ಸಾ ಮೀನುಗಳು ಬಂಗಾಳ ಕೊಲ್ಲಿಯಿಂದ ಗಂಗಾ ನದಿ ವ್ಯವಸ್ಥೆ ಮೂಲಕ ವಾರಾಣಸಿ, ಪ್ರಯಾಗ್ರಾಜ್ ಮತ್ತು ಅದರಾಚೆಗೆ ವಲಸೆ ಬರುತ್ತವೆ. 1975ರಲ್ಲಿ ಆರಂಭವಾದ ಫರಕ್ಕಾ ಬ್ಯಾರೇಜ್ ಕಾಮಗಾರಿಯು ಹಿಲ್ಸಾ ಮೀನುಗಳ ವಲಸೆ ಮಾರ್ಗವನ್ನು ತೀವ್ರವಾಗಿ ಅಡ್ಡಿಪಡಿಸಿತು. ಮಧ್ಯ ಮತ್ತು ಮೇಲ್ಭಾಗದ ಗಂಗಾ ನದಿಯಲ್ಲಿ ಈ ಮೀನುಗಳ ತೀವ್ರ ಕುಸಿತಕ್ಕೆ ಕಾರಣವಾಯಿತು. ಈ ಜಾತಿಯ ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ನುಗಾರಿಕಾ ಸಮುದಾಯಗಳ ಮೇಲೂ ಪರಿಣಾಮ ಬೀರಿತ್ತು.
ಮೀನಿನ ಪರಿಸರ, ಪೌಷ್ಟಿಕಾಂಶ, ಸಾಂಸ್ಕೃತಿಕ ಮತ್ತು ಜೀವನೋಪಾಯದ ಮಹತ್ವವನ್ನು ಗುರುತಿಸಿ, ಕೇಂದ್ರೀಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆ ಮತ್ತು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್ ಹಿಲ್ಸಾ ಮೀನುಗಳ ಪುನಃಶ್ಚೇತನಕ್ಕಾಗಿ ದೀರ್ಘಕಾಲೀನ ವೈಜ್ಞಾನಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದವು.
2019 ಮತ್ತು 2026 ರ ಜೂನ್ ನಡುವೆ ಕೇಂದ್ರೀಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆಯು ಮೀನು ಸಾಕಣೆ, ಕೃತಕ ಸಂತಾನೋತ್ಪತ್ತಿ, ಫಲವತ್ತಾದ ಮೊಟ್ಟೆಗಳ ಬಿಡುಗಡೆ ಮತ್ತು ಮೊಟ್ಟೆ ಕೇಂದ್ರ ಉತ್ಪಾದಿತ ಮೊಟ್ಟೆಗಳ ಬಿಡುಗಡೆ ಸೇರಿದಂತೆ ಸಮಗ್ರ ಕಾರ್ಯತಂತ್ರವನ್ನು ಜಾರಿಗೆ ತಂದಿತ್ತು ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
3.85 ಲಕ್ಷಕ್ಕೂ ಹೆಚ್ಚು ಮರಿ ಮತ್ತು ವಯಸ್ಕ ಹಿಲ್ಸಾಗಳನ್ನು ಸಾಕಲಾಗಿತ್ತು. ಆದರೆ, 40 ಲಕ್ಷಕ್ಕೂ ಹೆಚ್ಚು ಫಲವತ್ತಾದ ಮೊಟ್ಟೆಗಳು ಮತ್ತು ಎರಡರಿಂದ ಆರು ದಿನಗಳ ವಯಸ್ಸಿನ ಸುಮಾರು 9.4 ಲಕ್ಷ ಮೊಟ್ಟೆ ಕೇಂದ್ರದಲ್ಲಿ ಉತ್ಪಾದಿಸಿದ ಮೊಟ್ಟೆಗಳನ್ನು ಫರಕ್ಕಾ ಬ್ಯಾರೇಜ್ನ ಮೇಲ್ಭಾಗದಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದು ಅದು ತಿಳಿಸಿದೆ,
ಹಿಲ್ಸಾ ಮೀನು ಒಂದು ಸೂಕ್ಷ್ಮ ವಲಸೆ ಪ್ರಭೇದವಾಗಿರುವುದರಿಂದ, ಅದರ ಉಪಸ್ಥಿತಿಯು ನದಿ ಸಂಪರ್ಕ ಮತ್ತು ಆವಾಸಸ್ಥಾನದಲ್ಲಿ ಪರಿಸರ ಸುಧಾರಣೆಯ ಪ್ರಮುಖ ಸಂಕೇತವನ್ನು ನೀಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

