ನವದೆಹಲಿ: ಕೇಂದ್ರ ಸರಕಾರವು ತನ್ನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಸುರಕ್ಷಿತವಾಗಿದೆ ಎಂದು ಸಾರ್ವಜನಿಕ ಭರವಸೆಗಳನ್ನು ನೀಡಿದ ಬಳಿಕ ಭಾರತೀಯ ಆಟೋಮೊಬೈಲ್ ತಯಾರಕರ ಸಂಘವು (ಸಿಯಾಮ್) ಜುಲೈ 28ರಂದು ಇಂಧನ ಮಾಲಿನ್ಯ ಕುರಿತು ತಾನು ಸರಕಾರಕ್ಕೆ ಸಲ್ಲಿಸಿದ್ದ ದೂರನ್ನು ಹಿಂಪಡೆದಿತ್ತು.
ಕೆಲವು ಅಂಕಿಅಂಶಗಳ ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂದು ಅದು ತಿಳಿಸಿತ್ತು.
ಆದರೆ, Reuters ಸುದ್ದಿಸಂಸ್ಥೆಯ ಪ್ರಕಾರ ಅದು ಪರಿಶೀಲಿಸಿರುವ ಉದ್ಯಮದ ಉನ್ನತ ಅಧಿಕಾರಿಗಳ ನಡುವಿನ ಪ್ರತ್ಯೇಕ ಇಮೇಲ್ ಸಂವಹನಗಳು ಪ್ರಮುಖ ಕಾರು ತಯಾರಕರಾದ ಮಾರುತಿ ಸುಝುಕಿ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಂಪನಿಗಳು E20 ಬಗ್ಗೆ ತಮ್ಮ ಕಳವಳಗಳನ್ನು ಚರ್ಚಿಸಿರುವುದನ್ನು ತೋರಿಸಿವೆ.
ಮಾಲಿನ್ಯವನ್ನು ನಿಯಂತ್ರಿಸಲು ಮತ್ತು ತೈಲ ಆಮದನ್ನು ಕಡಿಮೆ ಮಾಡಲು ಸರಕಾರವು ಕಳೆದ ವರ್ಷದಿಂದ ದೇಶಾದ್ಯಂತ E20 ಇಂಧನವನ್ನು ಜಾರಿಗೆ ತಂದ ನಂತರ ಆಟೋ ಉದ್ಯಮವು ಅತ್ಯಂತ ಸಮಗ್ರ ಇಂಧನ ಪರೀಕ್ಷೆಯನ್ನು ನಡೆಸಿತ್ತು.
ಕಾರು ತಯಾರಕರು ಸರಕಾರದ E20 ಯೋಜನೆಯನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದರೂ, E20 ಪೆಟ್ರೋಲ್ನಲ್ಲಿರುವ ಕ್ಲೋರೈಡ್ ಮತ್ತು ತೇವಾಂಶದಂತಹ ಕಲ್ಮಶಗಳು ವಾಹನಗಳಿಗೆ ಹಾನಿ ಮಾಡುತ್ತಿವೆ ಎಂದು ಖಾಸಗಿಯಾಗಿ ಕಳವಳ ವ್ಯಕ್ತಪಡಿಸಿರುವುದನ್ನು ಅವರ ಇಮೇಲ್ಗಳು ಮೊದಲ ಬಾರಿಗೆ ಬಹಿರಂಗಪಡಿಸಿವೆ.
ಸುದ್ದಿಸಂಸ್ಥೆಯು ಪರಿಶೀಲಿಸಿದ ಹಿಂದೆ ಬಹಿರಂಗವಾಗಿರದ ಉದ್ಯಮದ ದತ್ತಾಂಶ ಮತ್ತು ಇಮೇಲ್ಗಳ ಪ್ರಕಾರ, ಹಲವು ಕಾರು ತಯಾರಕರು ಈಗಾಗಲೇ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಪಂಪ್ಗಳಿಂದ 250 ಕ್ಕೂ ಹೆಚ್ಚು ಇಂಧನ ಮಾದರಿಗಳನ್ನು ಸಂಗ್ರಹಿಸಿ ವ್ಯಾಪಕ ಪರೀಕ್ಷೆಗಳನ್ನು ನಡೆಸಿದ್ದು, 18 ರಾಜ್ಯಗಳ ಹೆಚ್ಚಿನ ಮಾದರಿಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಲೋರೈಡ್ ಕಲ್ಮಶ ಮತ್ತು ಹೆಚ್ಚಿನ ತೇವಾಂಶ ಪತ್ತೆಯಾಗಿತ್ತು.
ಖಾಸಗಿ ಇಮೇಲ್ಗಳ ಕುರಿತು ಪ್ರತಿಕ್ರಿಯೆ ಕೇಳಿದಾಗ, ಈ ದತ್ತಾಂಶವು ಕೇವಲ ಆಂತರಿಕ ಚರ್ಚೆ ಮತ್ತು ಪರಿಶೀಲನೆಗಾಗಿ ಮಾತ್ರ ಉದ್ದೇಶಿಸಲಾಗಿತ್ತು ಹಾಗೂ ಇದನ್ನು ಬಹಳ ಕಡಿಮೆ ಕಾರು ತಯಾರಕರು ಸಂಗ್ರಹಿಸಿದ್ದಾರೆ ಎಂದು ಸಿಯಾಮ್ ಸುದ್ದಿಸಂಸ್ಥೆಗೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯೆಗಾಗಿ ಮಾಡಿಕೊಂಡ ಮನವಿಗಳಿಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಂದಿಸಿಲ್ಲ. ಆದರೆ, ಇಂಧನ ಮಾಲಿನ್ಯವನ್ನು ತಡೆಯಲು ಭಾರತದ ತೈಲ ಮಾರಾಟ ಕಂಪನಿಗಳು ಸಿಯಾಮ್ ದೂರು ಸಲ್ಲಿಸುವ ಎರಡು ವಾರಗಳ ಮೊದಲೇ ಪೆಟ್ರೋಲ್ ಪಂಪ್ಗಳಲ್ಲಿ ಇಂಧನದ ಕಟ್ಟುನಿಟ್ಟಿನ ಪರೀಕ್ಷೆ ಪ್ರಾರಂಭಿಸಿದ್ದವು. ಕೇವಲ ನಾಲ್ಕು ಇಂಧನ ಮಾಲಿನ್ಯ ಪ್ರಕರಣಗಳು ಕಂಡುಬಂದಿವೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ತಿಳಿಸಿದ್ದಾರೆ.
ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸಹ ಕಳೆದ ವಾರ ವ್ಯಾಪಕ ಮತ್ತು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇಂಧನ ಮಾಲಿನ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿವೆ.

