ಕುಂಬಳೆ: ಪುತ್ತಿಗೆ ಪಂಚಾಯಿತಿ ಬಾಡೂರಿನಲ್ಲಿ ಮುಚ್ಚಿದ ಅಂಗಡಿ ವಠಾರದಲ್ಲಿ ಮದ್ಯವಯಸ್ಕರೊಬ್ಬರ ಮೃತದೇಹ ಭಾನುವಾರ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ದುರ್ವಾಸನೆ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ ಮಾಹಿತಿಯನ್ವಯ ತಪಾಸಣೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಅಂಗಡಿ ವಠಾರದಲ್ಲಿ ವ್ಯಾಪಕವಾಗಿ ಕುರುಚಲು ಕಾಡು ಬೆಳೆದಿದ್ದ ಹಿನ್ನೆಲೆಯಲ್ಲಿ, ಇವರ ಬಗ್ಗೆ ಮಾಹಿತಿ ಲಭಿಸಿರಲಿಲ್ಲ.
ಬಾಡೂರು ಸನಿಹದ ದೇಲಂಪಾಡಿಯ ಅಕ್ಕರಿ ಆಳ್ವ ಅವರ ಪುತ್ರ ವಿಠಲ ಆಳ್ವ(48)ಮೃತ ವ್ಯಕ್ತಿ. ಇವರು ಅವಿವಾಹಿತರಾಗಿದ್ದರು. ಮೃತದೇಹದಿಂದ ದುರ್ವಾಸನೆ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಎರಡು ದಿವಸಗಳ ಹಿಂದೆಯೇ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

