ಕಠ್ಮಂಡು: ನೇಪಾಳವು ಭೀಕರ ಪ್ರವಾಹದಿಂದ ತತ್ತರಿಸುತ್ತಿದ್ದು, ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ದೇಶವು ಶೋಕದಲ್ಲಿ ಮುಳುಗಿದ್ದರೆ, ಕೆಲ ದುಷ್ಕರ್ಮಿಗಳು ಮಾತ್ರ ಇದೇ ಸಂದರ್ಭವನ್ನು ಬಳಸಿಕೊಂಡು ಹಣ ಮಾಡುವ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ.
ಹೌದು, ಪ್ರವಾಹದಲ್ಲಿ ಬ್ಯಾಂಕ್ ಲಾಕರ್ ಒಂದು ಕೊಚ್ಚಿಹೋಗಿದ್ದು, ಅದನ್ನು ಒಡೆದು ಅದರಿಂದ ಲಕ್ಷಾಂತರ ರೂಪಾಯಿ ಹಣ ದೋಚಿದ್ದ 29 ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.
ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಕೊಚ್ಚಿಹೋಗಿದ್ದ ಲಾಕರ್, ಕೆಲ ದಿನಗಳ ಬಳಿಕ ಗಾಲ್ಚಿ ಗ್ರಾಮೀಣ ಪಟ್ಟಣ ಪಂಚಾಯಿತಿಯ ಬೆಲ್ಖುಖೋಲಾ ಬಳಿ ತ್ರಿಶೂಲಿ ನದಿಯಲ್ಲಿ ಪತ್ತೆಯಾಗಿದೆ ಎಂದು ಧಾಡಿಂಗ್ ಠಾಣೆ ಪೊಲೀಸರು ಹೇಳಿದ್ದಾರೆ. ನೀರಿನಲ್ಲಿ ತೇಲಿಬಂದ ಲಾಕರ್ ಅನ್ನು ಸ್ಥಳೀಯರು ತೆರೆದಿದ್ದು, ಲಕ್ಷಾಂತರ ರೂಪಾಯಿ ಹಣ ದೋಚಿರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.
ಕೂಡಲೇ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದು, ತನಿಖೆ ಚುರುಕುಗೊಳಿಸಲಾಗಿತ್ತು. ಪ್ರಾಥಮಿಕ ಶೋಧ ಕಾರ್ಯಾಚರಣೆಯಲ್ಲಿ 29 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಂದ 92,68,505 ನೇಪಾಳ ರೂಪಾಯಿ(ಭಾರತದ ಕರೆನ್ಸಿಯಲ್ಲಿ ಸುಮಾರು ₹ 57 ಲಕ್ಷ) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದ ಮೃತದೇಹಗಳ ಬಳಿ ಇದ್ದ ಬಂಗಾರದ ಓಲೆಗಳನ್ನು ಕದಿಯುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೇಪಾಳ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 626ಕ್ಕೆ ಏರಿದ್ದು, 2,426 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಈ ಪೈಕಿ, ನೇಪಾಳದ ಸುಮಾರು 1,924 ಮಂದಿ ಸೇರಿದ್ದು, 517 ವಿದೇಶಿಗರಾಗಿದ್ದಾರೆ.

