ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಶ್ರೇಣಿ ಕ್ಲರ್ಕ್ ಆಶಾಲತಾ ಅವರ ಆತ್ಮಹತ್ಯೆಗೆ ವರ್ಗಾವಣೆ ಮೂಲಕ ಉಂಟಾದ ಮಾನಸಿಕ ಒತ್ತಡ ಕಾರಣವಲ್ಲ ಎಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಸಲ್ಲಿಸಿದ ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಎಡಿಎಂ ನೇತೃಥ್ವದ ಅಧಿಕಾರಿಗಳು ನಡೆಸಿದ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಈ ವರದಿಯನ್ನು ರಾಜ್ಯ ರಾಜ್ಯ ಕಂದಾಯ ಇಲಾಖೆ ಆಯುಕ್ತರಿಗೆ ಸಲ್ಲಿಸಲಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಿಬಂದಿ ಆಶಾಲತಾ ಆತ್ಮಹತ್ಯೆಗೆ ವರ್ಗಾವಣೆಯ ಮನೋವ್ಯಥೆ ಕಾರಣವೆಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಪಿಣರಾಯಿ ವಿಜಯನ್ ಆರೋಪಿಸಿದ್ದರು. ಸಿಪಿಐಎಂ ಇದೇ ಆರೋಪ ಹೊರಿಸಿ ಪ್ರತಿಭಟನೆ ನಡೆಸಿತ್ತು. ಪ್ರಸಕ್ತ ಎಡಿಎಂ ನೇತೃತ್ವದ ಅಧಿಕಾರಿಗಳು ನಡೆಸಿದ ತನಿಖಾ ವರದಿ ಈ ಆರೋಪವನ್ನು ತಳ್ಳಿಹಾಕಿದೆ. ಮೃತರು ಈ ಹಿಂದೆಯೇ ಖಿನ್ನತೆ ಹಾಗೂ ಮಾನಸಿಕ ಹತಾಶೆಯಲ್ಲಿದ್ದರೆಂದು ವರದಿ ಉಲ್ಲೇಖಿಸಿದೆ.
ಎಡನೀರು ಬಳಿಯ ಎದುರ್ತೋಡು ನಿವಾಸಿ ಆಶಾಲತಾ ಅವರು ಕರ್ತವ್ಯದಲ್ಲಿರುವಾಗಲೇ ಐಸ್ ಕ್ರೀಂನಲ್ಲಿ ಇಲಿ ವಿಷ ಬೆರೆಸಿ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗದೆ ಆ. 9 ರಂದು ಮೃತಪಟ್ಟಿದ್ದರು.

