ಪೆರ್ಲ: ಮಂಗಳೂರು ವಿಶ್ವ ವಿದ್ಯಾಲಯದ ಮಂಗಳಗಂಗೋತ್ರಿ ಕನಕದಾಸ ಅಧ್ಯಯನ ಪೀಠದ ಕನಕದಾಸ ಸಂಶೋಧನಾ ಕೇಂದ್ರ ವತಿಯಿಂದ 'ಕನಕಾಭಿಯಾನ'ಶಾಲಾ ವಿದ್ಯಾರ್ಥಿಗಳಿಗೆ ಕನಕ ಚಿಂತನೆ ಪ್ರಸಾರ ಮಾಲಿಕೆಯನ್ವಯ ಕನಕದಾಸರ ಜೀವನ ಮತ್ತು ಸಾಹಿತ್ಯದ ಕುರಿತು ಉಪನ್ಯಾಸ ಮತ್ತು ರಸಪ್ರಶ್ನೆ ಕಾರ್ಯಕ್ರಮ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಸಭಾಂಗಣದಲ್ಲಿ ಜರುಗಿತು.
ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕನಕಾಭಿಯಾನದ ಕಾಸರಗೋಡು ಜಿಲ್ಲಾ ಸಂಯೋಜಕಿ ರಾಜಶ್ರೀ ಟಿ. ರೈ, ಪೆರ್ಲ ಆಶಯ ಭಾಷಣ ಮಾಡಿ, ಸಾಮಾಜಿಕ ಸಮಾನತೆ, ಮಾನವೀಯತೆ ಹಾಗೂ ಭಕ್ತಿಯ ಸಂದೇಶವನ್ನು ತಮ್ಮ ಸಾಹಿತ್ಯದಲ್ಲಿ ಸಾರುವ ಮೂಲಕ ಕನಕದಾಸರು ಶ್ರೇಷ್ಠ ದಾರ್ಶನಿಕ ಹಾಗೂ ಸಂತ ಕವಿಯಾಗಿ ಖ್ಯಾತಿ ಗಳಿಸಿರುವುದಾಗಿ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾರ್ಥಿ, ಸಾಯಿಸುಮಾ ನಾವಡ ಕಾರಿಂಜ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕನಕದಾಸರ ಜೀವನ, ಸಾಹಿತ್ಯ ಹಾಗೂ ಅವರ ಚಿಂತನೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪೆರ್ಲ ಶ್ರೀ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ವೆಂಕಟ್ರಾಜ್ ಮಿತ್ರ ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ ಉಪಸ್ಥಿತರಿದ್ದರು.
ನಂತರ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ಕನಕದಾಸರ ಹುಟ್ಟು, ಬಾಲ್ಯ, ಹಾಗೂ ಅವರ ಸಾಹಿತ್ಯಿಕ ಕೊಡುಗೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿದರು.
ಶಾಲಾ ಶಿಕ್ಷಕರಾದ ತೇಜಸ್ ಆಚಾರ್ಯ ಕೊಲ್ಲಂಗಾನ ಸ್ವಾಗತಿಸಿದರು. ಉದಯ ಶಂಕರ ಅಮೈ ನಿರೂಪಿಸಿದರು. ಕೃಷ್ಣರಾಜ ಜಿ.ವಂದಿಸಿದರು.



