ಕಾಸರಗೋಡು: ಬೇಕಲ ತ್ರಿಕ್ಕನ್ನಾಡ್ ಪ್ರದೇಶದಲ್ಲಿ ಕಡಲ್ಕೊರೆತ ಪ್ರದೇಶದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾದ ಕರ್ಗಲ್ಲಿನ ತಡೆಗೋಡೆ ಸಂಪೂರ್ಣ ಕಡಲಗರ್ಭ ಸೇರರಿಕೊಳ್ಳುತ್ತಿದ್ದು, ಇಲ್ಲಿನ ಜನತೆಯ ಶಾಶ್ವತ ತಡೆಗೋಡೆ ನಿರ್ಮಾಣದ ಬೇಡಿಕೆಗೆ ಇನ್ನೂ ಪರಿಹಾರ ಲಭಿಸಿಲ್ಲ.
ಬೇಕಲ ತ್ರಿಕ್ಕನ್ನಾಡ್ ತ್ರಯಂಬಕೇಶ್ವರ ಕ್ಷೇತ್ರ ವಠಾರದ ಕರಾವಳಿ ಪ್ರದೇಶ ಭಾರೀ ಪ್ರಮಾಣದಲ್ಲಿ ಕಡಲ್ಕೊರೆತ ಸಂಭವಿಸುವ ಸ್ಥಳವಾಗಿದ್ದು, ಕರಾವಳಿ ರಕ್ಷಣೆಗಾಗಿ ಅಳವಡಿಸಿರುವ ಕರ್ಗಲ್ಲು ತಡೆಗೋಡೆ ಹೇಳ ಹೆಸರಿಲ್ಲದಂತೆ ನಾಶಗೊಂಡಿದೆ. ಕಾಸರಗೋಡು-ಕಾಞಂಗಾಡು ಮಧ್ಯೆ ಚಂದ್ರಗಿರಿ ಹಾದಿಯಾಗಿ ಸಂಚರಿಸುವ ಕೆಎಸ್ಟಿಪಿ ರಸ್ತೆ ಕಡಲ್ಕೊರೆತದ ಪರಿಣಾಮ ಬೇಕಲ ತ್ರಿಕ್ಕನ್ನಾಡಿನಲ್ಲಿ ಅಪಾಯದ ಸ್ಥಿತಿಯಲ್ಲಿದೆ.
ಈ ಪ್ರದೇಶದಲ್ಲಿ ಕಡಲ್ಕೊರೆತದಿಂದ ರಕ್ಷಣೆ ಒದಗಿಸಲು ಸುಮಾರು 30ಮೀಟರ್ಗೂ ಹೆಚ್ಚು ಉದ್ದಕ್ಕೆ ಪೇರಿಸಿಡಲಾಗಿದ್ದ ಬೃಹತ್ಗಾತ್ರದ ಕಲ್ಲುಗಳು ಈಗ ಅಲೆಗಳ ಹೊಡೆತಕ್ಕೆ ಸಿಲುಕಿ ಕಡಲಿನೊಳಗೆ ಸೇರಿಕೊಂಡಿದೆ. ಇದರಿಂದ ಮತ್ತಷ್ಟು ಕರಾವಳಿ ಪ್ರದೇಶವನ್ನು ಕಡಲು ಆಕ್ರಮಿಸತೊಡಗಿದೆ. ಈಪ್ರದೇಶದಲ್ಲಿ ಕೆಎಸ್ಟಿಪಿ ರಸ್ತೆ ಅಂಚಿನ ವರೆಗೂ ಭೂಪ್ರದೇಶ ದುರ್ಬಲಗೊಂಡಿದೆ. ಇಲ್ಲಿ ಬೃಹತ್ ಕರ್ಗಲ್ಲುಗಳನ್ನು ವ್ಯವಸ್ಥಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಪೇರಿಸುವ ಬದಲು, ಅಸ್ತವ್ಯಸ್ತವಾಗಿ ಅಳವಡಿಸಿರುವುದರಿಂದ ಸುಲಭವಾಗಿ ಕಡಲು ಸೇರುವಂತಾಗಿದೆ.
ಸಮುದ್ರದ ಬೃಹತ್ ಅಲೆಗಳಿಂದ ಈ ಪ್ರದೇಶದಲ್ಲಿ ಭಾರೀ ಭೂಕುಸಿತವುಂಟಾಗಿದ್ದು, ಬಹಳಷ್ಟು ಪ್ರದೇಶ ಅಪಾಯ ಎದುರಿಸುತ್ತಿದೆ. ಬಹುತೇಕ ಪ್ರದೇಶದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ತಡೆಗೋಡೆ ಹೇಳ ಹೆಸರಿಲ್ಲದಂತೆ ಸಮುದ್ರ ಸೇರ್ಪಡೆಗೊಂಡಿದೆ. ಭಾರೀ ಕಡಲ್ಕೊರೆತ ತಡೆಗಟ್ಟಲು ಈ ಪ್ರದೇಶದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣವೊಂದೇ ಪರಿಹಾರವಾಗಿದೆ.
ಬೇಕಲ ತ್ರಿಕ್ಕನ್ನಾಡಿನ ಕಡಲ್ಕೊರೆತ ಪ್ರದೇಶದಲ್ಲಿ 3,700.88 ಟನ್ ಕರ್ಗಲ್ಲು ಬಳಸಿ ಇಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದು, ಕಲ್ಲು ಅಳವಡಿಕೆಯಲ್ಲಿನ ಲೋಪದಿಂದ ಇಲ್ಲಿ ಕಲ್ಲುಗಳು ಸಮುದ್ರ ಪಾಲಾಗಿರುವುದಾಗಿ ಸ್ಥಳೀಯ ಮೀನುಗಾರರು ತಿಳಿಸುತ್ತಾರೆ. ಸಮುದ್ರದ ಬಲವಾದ ಅಲೆಗಳಿಂದ ತಡೆಗೋಡೆ ಶಿಥಿಲಗೊಳ್ಳುತ್ತಾ ಬರಲಾರಂಭಿಸಿದೆ. ವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ನಿರ್ಮಿಸದಿರುವುದರಿಂದ ದಿನಕಳೆದಂತೆ ಇಲ್ಲಿನ ತಡೆಗೋಡೆ ಹಾನಿಗೀಡಗುತ್ತಾ ಬಂದಿದೆ.
ದೋಣಿಗಳಿಗೂ ಹಾನಿ:
ತಡೆಗೋಡೆಯಿಂದ ಬೇರ್ಪಟ್ಟ ಕಲ್ಲುಗಳು ಸಮುದ್ರದಲ್ಲಿ ಅಲ್ಲಲ್ಲಿ ಚದುರಿಕೊಂಡಿರುವುದರಿಂದ ಈ ಪ್ರದೇಶದ ಮೀನುಗಾರಿಕಾ ದೋಣಿಗಳನ್ನು ದಡ ಸೇರಿಸುವುದು ಅಥವಾ ಸಮುದ್ರಕ್ಕಿಳಿಸುವುದು ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಬೃಹತ್ ಕಲ್ಲುಗಳಿಗೆ ದೋಣಿ ಒರೆಸುವುದರಿಂದ ದೋಣಿಗೆ ಹಾನಿಯುಂಟಾಗುತ್ತಿದೆ. ಈಗಾಗಲೇ ಕೆಲವೊಂದು ದೋಣಿಗಳಿಗೆ ಕಲ್ಲುಒರೆಸಿರುವ ಪರಿಣಾಮ ಹಾನಿಯುಂಟಾದ ಘಟನೆ ನಡೆದಿದೆ.
ಅಭಿಮತ:
ನೀರಿನಡಿಯಲ್ಲಿ ಸೇರಿಕೊಂಡಿರುವ ಈ ಕಲ್ಲುಗಳ ಚೂಪಾದ ಭಾಗ ದೋಣಿಗೆ ಅಪ್ಪಳಿಸಿದಲ್ಲಿ ದೋಣಿಗೆ ಹನಿಯಾಗುವುದರ ಜತೆಗೆ ಮಗುಚಿಬೀಳುವ ಅಪಾಯವೂ ಕಾಡುತ್ತಿದೆ. ದಿನ ಕಳೆದಂತೆ ಕಡಲ್ಕೊರೆತದಿಂದ ಭೂಪ್ರದೇಶ ಸಮುದ್ರ ಪಾಲಾಗುತ್ತಿದೆ. ಇದು ಮೀನುಗಾರರಿಗೂ ಅಪಾಯದ ಸೂಚನೆಯಾಗಿದೆ. ಕರಾವಳಿ ಸಂರಕ್ಷಣೆಗಾಗಿ ಶಾಶ್ವತ ತಡೆಗೋಡೆ ನಿರ್ಮಿಸಲು ಸರ್ಕಾರ ಮುಂದಾಗಬೇಕಾಗಿದೆ.
ಗಂಗಾಧರನ್, ಸ್ಥಳೀಯ ಮೀನುಗರರು
ಬೇಕಲ, ತ್ರಿಕ್ಕನ್ನಾಡ್

