ನವದೆಹಲಿ: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ವಿರುದ್ಧ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದು, ಶುಕ್ರವಾರ ಈ ಕುರಿತ ನೋಟಿಸ್ ಸಲ್ಲಿಸಿದ್ದಾರೆ.
'ಸದನದಲ್ಲಿ ಚರ್ಚೆಯ ವೇಳೆ, ಇತ್ತೀಚೆಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆದಿಲ್ಲ ಎಂದು ಸಚಿವ ಸಿಂಗ್ ಹೇಳಿದ್ದರು.
ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ, ಸದನದ ದಾರಿ ತಪ್ಪಿಸಿದ್ದಾರೆ' ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.
ಈ ಕುರಿತು ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಿದ್ದಾರೆ. 'ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ನೀಡಿದ ಹೇಳಿಕೆಯು ವಾಸ್ತವಿಕ ಸಂಗತಿಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಸದನದ ದಾರಿ ತಪ್ಪಿಸುವುದು ಹಕ್ಕುಚ್ಯುತಿ ಹಾಗೂ ಸದನಕ್ಕೆ ಮಾಡುವ ಅವಮಾನವಾಗುತ್ತದೆ' ಎಂದು ಅವರು ನೋಟಿಸ್ನಲ್ಲಿ ವಿವರಿಸಿದ್ದಾರೆ.
ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿರುವ ವಿಷಯವನ್ನು ಅವರು 'ಎಕ್ಸ್'ನಲ್ಲಿಯೂ ಹಂಚಿಕೊಂಡಿದ್ದಾರೆ.

