ಪೆರ್ಲ: ಓಣಂ ಹಬ್ಬದ ವಿಶೇಷ ಕಾರ್ಯಾಚರಣೆಯ ಅಂಗವಾಗಿ, ಪೆರ್ಲ ಸನಿಹದ ವರ್ಮುಡಿ ಖಂಡಿಗೆಯಲ್ಲಿ ಅಬಕಾರಿದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಮಾರಕ ಎಂಡಿಎಂಎ ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಅಬೂಬಕರ್ ಎಂಬವರ ಪುತ್ರ ಅಬ್ದುಲ್ ಅಜೀಜ್ ಬಂಧಿತ. ಈತನ ವಶದಲ್ಲಿದ್ದ 162ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಬದಿಯಡ್ಕ ವಲಯ ಇನ್ಸ್ಪೆಕ್ಟರ್ ಜಿಷ್ಣು ಪಿ.ಆರ್ ನೇತೃತ್ವದ ತಂಡ ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಿದೆ. ಮನೆ ಎದುರು ನಿಲ್ಲಿಸಲಾಗಿದ್ದ ಕಾರಿನೊಳಗಿಂದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಎಂಡಿಎಂಎ ದಾಸ್ತಾನಿರಿಸಿದ್ದ ಕಾರನ್ನೂ ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಎನ್ಡಿಪಿಎಸ್ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಸಹಾಯಕ ಅಬಕಾರಿ ನಿರೀಕ್ಷಕ ಶ್ರೀನಿವಾಸನ್ ಪಾಥಿಲ್, ಪ್ರಿವೆಂಟಿವ್ ಅಧಿಕಾರಿಗಳಾದ ಮಂಜುನಾಥ ಆಳ್ವ ಕೆ, ವಿಜಯನ್ ಸಿ, ಪ್ರಜಿತ್ ಕೆ.ಆರ್, ಸಿವಿಲ್ ಅಬಕಾರಿ ಅಧಿಕಾರಿಗಳಾದ ಪ್ರಭಾಕರನ್ ಎಂ.ಎ, ಜನಾರ್ದನ ಎನ್, ವಿನೋದ್ ಬಿ, ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿ ಧನ್ಯ ಟಿ, ಸಾಗರ್ ಎಸ್.ಜಿ. ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು. ವಶಪಡಿಸಿಕೊಮಡಿರುವ ಎಂಡಿಎಂಎ ಮೌಲ್ಯ ಆರು ಲಕ್ಷ ರೂ. ಅಂದಾಜಿಸಲಾಗಿದೆ.



