ಬದಿಯಡ್ಕ: ನಾಡಿನ ಸಮಸ್ತ ಜನತೆಗೆ 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಶುಭಾಶಯದೊಂದಿಗೆ ಬದಿಯಡ್ಕ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ಅಧ್ಯಕ್ಷ ಶಂಕರ ಡಿ. ಅವರು ಧ್ವಜಾರೋಹಣಗೈದರು. ಅವರು ಮಾತನಾಡಿ, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ನೀಡಿದ ಮಹಾತ್ಮರು ಹಾಗೂ ದೇಶಪ್ರೇಮಿಗಳ ಕೊಡುಗೆ ಎಂದಿಗೂ ಅಮರ. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಪಾತ್ರವೂ ಮುಖ್ಯವಾಗಿದೆ. ನಮ್ಮ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ, ನೈರ್ಮಲ್ಯ, ಜಲ ಸಂರಕ್ಷಣೆ ಮತ್ತು ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ. ಈ ಸ್ವಾತಂತ್ರ್ಯೋತ್ಸವವು ನಮ್ಮಲ್ಲಿ ಐಕ್ಯತೆ, ಸಹೋದರತೆ ಹಾಗೂ ದೇಶಸೇವೆಯ ಭಾವನೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಶ್ಯಾಮಪ್ರಸಾದ ಸರಳಿ, ಲೀಲಾವತಿ, ಉಷಾ ಪಳ್ಳತ್ತಡ್ಕ, ಸ್ಥಳೀಯರು, ಗ್ರಾಮಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

.jpg)
