ತಿರುವನಂತಪುರಂ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಹೊಸದಿಲ್ಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಬಗ್ಗೆ ಯೂಟ್ಯೂಬ್ ವೀಡಿಯೊ ಒಂದರಲ್ಲಿ ನೀಡಿದ್ದಾರೆ ಎನ್ನಲಾದ ಅಸಹ್ಯಕರ ಹೇಳಿಕೆಗಾಗಿ ಬಂಧಿತರಾಗಿದ್ದ ಬಲಪಂಥೀಯ ರಾಜಕೀಯ ವಿಶ್ಲೇಷಕ , ಆರೆಸ್ಸೆಸ್ ಬೆಂಬಲಿಗ ಟಿ.ಜಿ. ಮೋಹನ್ ದಾಸ್ರನ್ನು ಸೋವವಾರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.
ಬಿಜೆಪಿಯ ಚಿಂತನಾ ಘಟಕದ ಮಾಜಿ ವರಿಷ್ಠರಾದ ಮೋಹನ್ದಾಸ್ ಅವರನ್ನು ಮಲಬಾರ್ನ ಮಟ್ಟಾಂಚೇರಿಯಲ್ಲಿರುವ ಅವರ ನಿವಾಸದಿಂದ ಪೊಲೀಸರು ರವಿವಾರ ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣದ ತನಿಖೆಗೆ ಸಹಕರಿಸಬೇಕು ಹಾಗೂ ಆರೋಪಿಸಲಾದ ಅಪರಾಧವನ್ನು ಪುನಾರವರ್ತಿಸಕೂಡದು ಎಂಬ ಶರತ್ತಿನೊಂದಿಗೆ ಜಾಮೀನು ನೀಡಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ತಿರುವನಂತಪುರಂ ಸೈಬರ್ ಪೊಲೀಸ್ ಠಾಣೆಯ ತಂಡವು, ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳ ಸಹಕಾರದಿಂದ ಮೋಹನ್ದಾಸ್ರನ್ನು ಮಟ್ಟಾಂಚೇರಿ ಬಳಿಯ ಕೂವಪ್ಪಾಡಂನಲ್ಲಿರುವ ಅವರ ನಿವಾಸದಿಂದ ಕರೆದೊಯ್ದಿದೆ.
ರವಿವಾರ ಸಂಜೆ ಸುಮಾರು 7:45ಕ್ಕೆ ಮೋಹನ್ ದಾಸ್ರನ್ನು ಅವರ ನಿವಾಸದಿಂದ ಹೊರಗೆ ಕರೆತಂದು ವೈದ್ಯಕೀಯ ತಪಾಸಣೆಗಾಗಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಹೊರಗೆ ನೆರೆದಿದ್ದ ಬೆಂಬಲಿಗರು ಅವರ ಪರವಾಗಿ ಘೋಷಣೆಗಳನ್ನು ಕೂಗಿದರು.
ವೈದ್ಯಕೀಯ ತಪಾಸಣೆಯ ನಂತರ ಅವರನ್ನು ತಿರುವನಂತಪುರಂಗೆ ಕರೆದೊಯ್ಯಲಾಯಿತು.
ಮೋಹನ್ ದಾಸ್ ಅವರ ಯೂಟ್ಯೂಬ್ ಚಾನೆಲ್ 'ಪತ್ರಿಕಾ'ದಲ್ಲಿ ಹಾಕಲಾಗಿರುವ ವೀಡಿಯೊಗಳು ಸಾರ್ವಜನಿಕ ಶಾಂತಿಗೆ ಭಂಗ ತರುವ ಹಾಗೂ ಜನರಲ್ಲಿ ಭಯ ಮತ್ತು ಅಶಾಂತಿಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿವೆ ಎಂಬ ದೂರಿನ ಆಧಾರದಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು.
ದಿಲ್ಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಭಯವನ್ನು ಹುಟ್ಟಿಸುವ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಜುಲೈ 24 ಮತ್ತು 25 ರಂದು ಈ ವೀಡಿಯೊಗಳನ್ನು ಪ್ರಸಾರ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
''ಪ್ರತಿಭಟನೆಯು ಸಾಮೂಹಿಕ ಅತ್ಯಾಚಾರ ಘಟನೆಗಳಿಗೆ ಕಾರಣವಾಗಬಹುದು. ಆದರೆ, ಯಾವುದೇ ದೂರು ದಾಖಲಾಗದು. ಯಾಕೆಂದರೆ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರು ಅತ್ಯಾಚಾರವನ್ನು ಇಷ್ಟಪಡುತ್ತಾರೆ ಹಾಗೂ ಅತ್ಯಾಚಾರವನ್ನು ಆನಂದಿಸುವ ಹುಡುಗಿಯರು ಅಲ್ಲಿದ್ದಾರೆ'' ಎಂದು ಆರೆಸ್ಸೆಸ್ ಸಿದ್ಧಾಂತಿ ವೀಡಿಯೊದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
''ನನ್ನಲ್ಲಿ ಅಧಿಕಾರವಿದ್ದರೆ, ಕರ್ಫ್ಯೂ ವಿಧಿಸಿ ಪ್ರತಿಭಟನಾಕಾರರನ್ನು ಚದುರಿಸಲು ಆದೇಶಿಸುತ್ತಿದ್ದೆ. ಅವರು ನಿರಾಕರಿಸಿದರೆ, ಗುಂಡಿನ ದಾಳಿ ನಡೆಸುತ್ತಿದ್ದೆ. ಕೆಲವು ಜನರು ಸಾಯಬಹುದು ಅಥವಾ ಶಾಶ್ವತವಾಗಿ ಗಾಯಗೊಳ್ಳಬಹುದು. ಆದರೆ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗುತ್ತದೆ ಮತ್ತು ಮೃತದೇಹಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತದೆ'' ಎಂಬುದಾಗಿ ಅವರು ಹೇಳಿದ್ದರೆನ್ನಲಾಗಿದೆ.

