ಜಮ್ಮು: ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಮತ್ತು ಯಾತ್ರಾರ್ಥಿಗಳ ಆಗಮನದಲ್ಲಿ ಇಳಿಕೆಯಾಗಿದ್ದರಿಂದ ಜಮ್ಮುವಿನಿಂದ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು(ಆ.8) ಭಗವತಿ ನಗರ ಮೂಲ ಶಿಬಿರದಿಂದ ಕಾಶ್ಮೀರ ಕಣಿವೆಗೆ ತೆರಳಲು ಯಾವುದೇ ಹೊಸ ಯಾತ್ರಿಕರ ತಂಡಕ್ಕೆ ಅನುಮತಿ ನೀಡಲಾಗಿಲ್ಲ.
ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ರಸ್ತೆಯಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿಗತಿಯನ್ನು ಆಧರಿಸಿ ಯಾತ್ರಿಕರ ಸಂಚಾರವನ್ನು ಮರುಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಹವಾಮಾನ ಇಲಾಖೆ ನೀಡಿರುವ ಮುನ್ನೆಚ್ಚರಿಕೆಯ ಪ್ರಕಾರ, ಆಗಸ್ಟ್ 11ರವರೆಗೆ ಜಮ್ಮು ಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ದಿಢೀರ್ ಪ್ರವಾಹ ಮತ್ತು ಭೂಕುಸಿತದ ಅಪಾಯವಿದೆ ಎಂದು ತಿಳಿಸಿದ್ದಾರೆ.
ಜುಲೈ 3ರಂದು ಈ ಬಾರಿಯ ಯಾತ್ರೆ ಪ್ರಾರಂಭವಾದ ನಂತರ ಹಿಮಾಲಯದ 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹಾ ಮಂದಿರಕ್ಕೆ ಇದುವರೆಗೆ 4.75 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಭೇಟಿ ನೀಡಿದ್ದಾರೆ. ಆಗಸ್ಟ್ 28ರಂದು ಈ 57 ದಿನಗಳ ಯಾತ್ರೆ ಮುಕ್ತಾಯಗೊಳ್ಳಲಿದೆ.

