ಲಖನೌ: ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಯಶಸ್ವಿ ಹೋರಾಟದಿಂದ ಪ್ರೇರಣೆಗೊಂಡಿರುವ ಉತ್ತರ ಪ್ರದೇಶ ಯುವಕರು, 'ಜಸ್ಟೀಸ್ ಮೋರ್ಚಾ' ಎನ್ನುವ ಹೊಸ ಸಂಘಟನೆ ರೂಪಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ, ನಿರುದ್ಯೋಗ, ವಿಶ್ವವಿದ್ಯಾಲಯ ಹಾಗೂ ಇತರ ಕಡೆಗಳಲ್ಲಿ ಖಾಲಿ ಇರುವ ಹುದ್ದೆಗಳು ಸೇರಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೋರಾಟ ಮಾಡಲು ಮುಂದಾಗಿದೆ.
ಸೋಮವಾರ ಲಖನೌನಲ್ಲಿ ಪತ್ರಿಕಾಗೋಷ್ಠಿ ನಡೆಸಿ 'ಜಸ್ಟೀಸ್ ಮೋರ್ಚಾ'ವನ್ನು ಘೋಷಿಸಲಾಯಿತು.
ಎಲ್ಲಾ ಜಿಲ್ಲೆಯ ಯುವಕರನ್ನು ಒಗ್ಗೂಡಿಸಲು ಬುಧವಾರದಿಂದ ರಾಜ್ಯದಾದ್ಯಂತ ಚಳವಳಿ ರೂಪಿಸುವುದಾಗಿ ತಿಳಿಸಿದ್ದಾರೆ. ಆಗಸ್ಟ್ 20ರಿಂದ ಗೋರಖಪುರದ ಚೌರಾ-ಚೌರಿಯಿಂದ ಸೈಕಲ್ ಯಾತ್ರೆ ಆರಂಭವಾಗಲಿದ್ದು, ಅಕ್ಟೋಬರ್ 2ರಂದು ಲಖನೌನಲ್ಲಿ ಪರ್ಯಾವಸಾನಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಷ್ಟ್ರವ್ಯಾಪಿ ಅಭಿಯಾನ
'ಮುಂದಿನ 50 ದಿನಗಳಲ್ಲಿ ನಾವು 75 ಜಿಲ್ಲೆಗಳ ಕಾಲೇಜು, ವಿಶ್ವವಿದ್ಯಾಲಯ ಹಾಗೂ ಕೋಚಿಂಗ್ ಸೆಂಟರ್ನಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಲಿದ್ದೇವೆ. ವಿದ್ಯಾರ್ಥಿ ನಾಯಕರೊಂದಿಗೆ ಚರ್ಚೆ ಹಾಗೂ ಸಂವಾದ ನಡೆಸಲಿದ್ದೇವೆ' ಎಂದು ಸಂಸ್ಥಾಪಕರಲ್ಲಿ ಓರ್ವರಾದ ಸುದಾಂಶು ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿವಿಧ ಸರ್ಕಾರಿ ಇಲಾಖೆಗಲ್ಲಿ ಇರುವ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದ ಬಗ್ಗೆ ಯುವಜನರಲ್ಲಿ ತೀವ್ರ ಆಕ್ರೋಶ ಇದೆ ಎಂದು ಅವರು ಹೇಳಿದ್ದಾರೆ.
'ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ದಿನಾಂಕ ಘೋಷಣೆ, ಪಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಮೇಲಿನ ಪ್ರಕರಣ ಹಿಂಪಡೆಯುವುದು, ಗುತ್ತಿಗೆ ಪದ್ಧತಿ ರದ್ದುಗೊಳಿಸುವುದು ಹಾಗೂ ಖಾಸಗಿ ಶಾಲೆಯಲ್ಲಿ ಶುಲ್ಕಕ್ಕೆ ಮಿತಿ ಹೇರುವುದು ಸೇರಿ ಹಲವು ಬೇಡಿಕೆಗಳಿವೆ' ಎಂದು ಮತ್ತೊರ್ವ ಸಂಸ್ಥಾಪಕ ಗೋವಿಂದ ಹೇಳಿದರು.
ಅಕ್ಟೋಬರ್ 2ರ ಒಳಗಾಗಿ ಈ ವಿಷಯಗಳನ್ನು ಸರ್ಕಾರ ಪರಿಗಣಿಸದಿದ್ದರೆ, ಬೀದಿಗಿಳಿದು ಹೋರಾಟ ಮಾಡಲಾಗುವುದು ಎನ್ನುವ ಎಚ್ಚರಿಕೆಯನ್ನು ಇದೇ ವೇಳೆ ನೀಡಿದರು.
ಇದೊಂದು ರಾಜಕೀಯೇತರ ಸಂಘಟನೆ ಎಂದು ಮೋರ್ಚಾದ ಪದಾಧಿಕಾರಿಗಳು ತಿಳಿಸಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಿಗಷ್ಟೇ ಸೀಮಿತವಾಗಿದ್ದರೆ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವಿದ್ಯಾರ್ಥಿ ಸಂಘಟನೆಗಳ ಬೆಂಬಲ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

