ಉಪ್ಪಳ: ಮಂಜೇಶ್ವರದಲ್ಲಿ ಇತ್ತೀಚೆಗೆ ನಡೆದ ಹಲಸು ಮೇಳದ ಪ್ರೇರಣೆಯಿಂದ ಜನತೆಯ ಅಪೇಕ್ಷೆ ಮೇರೆಗೆ ಮತ್ತೊಂದು ಹಲಸು ಮೇಳ ಇಂದಿನಿಂದ(ಆ.9ರಿಂದ) 11ರ ವರೆಗೆ ಮೂರು ದಿನಗಳ ಕಾಲ ಬಂದ್ಯೋಡು ಬಳಿಯ ಪಚ್ಚಂಬಳ ಗಾರ್ಡನ್ ಸಿಟಿ ಆಡಿಟೋರಿಯಂನಲ್ಲಿ ಜರಗಲಿದೆ.
ಬೆನಕ ಇವೆಂಟ್ಸ್ ಕುಂದಾಪುರ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಮೇಳದಲ್ಲಿ ಹಲಸಿನ ಹಣ್ಣುಗಳು ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮಾವು ಮತ್ತು ಹಲಸಿನ ಹೋಳಿಗೆ, ಹಲಸಿನ ಜಿಲೇಬಿ, ಹಲಸಿನ ಅಪ್ಪ, ಕಬಾಬ್, ಮಂಚೂರಿ ಹಾಗೂ ಹಲಸಿನ ಬಿರಿಯಾನಿ ಸ್ಥಳದಲ್ಲೇ ಸಿದ್ಧಪಡಿಸಿ ಗ್ರಾಹಕರಿಗೆ ನೀಡಲಾಗುತ್ತದೆ. ಬೆಂಗಳೂರು ರಾಮನಗರದ ವಿಶೇಷ ಹತ್ತು ಬಗೆಯ ಮಾವಿನ ಹಣ್ಣುಗಳು, ತುಮಕೂರು ಮತ್ತು ಪಾಂಡಿಚೇರಿಯ ಚಂದ್ರ ಹಲಸು ಸೇರಿದಂತೆ ವಿವಿಧ ವೈವಿಧ್ಯಮಯ ತಳಿಯ ಹಲಸಿನ ಹಣ್ಣುಗಳು, ಹಲಸಿನ ಹಪ್ಪಳ, ಚಿಪ್ಸ್, ಜಾಮ್, ಉಪ್ಪಿನಕಾಯಿ, ಹಲಸಿನ ಹಣ್ಣಿನ ಐಸ್ಕ್ರೀಮ್ ಹಾಗೂ ಅಪ್ಪೆಮಿಡಿ ಚಟ್ನಿ ಸೇರಿದಂತೆ ಹಲವು ಬಗೆಯ ಮೌಲ್ಯವರ್ಧಿತ ಉತ್ಪನ್ನಗಳು ಮೇಳದಲ್ಲಿ ಇರಲಿವೆ. ಇಳಕಲ್ ಮತ್ತು ಮೈಸೂರು ಸಿಲ್ಕ್ ಸೀರೆಗಳು, ಚೆನ್ನಪಟ್ಟಣದ ಬೊಂಬೆಗಳು, ಮಣ್ಣಿನ ಆಭರಣಗಳು, ಬೇಲೂರಿನ ಶಿಲಾಮೂರ್ತಿಗಳು ಹಾಗೂ ಆಯುರ್ವೇದಿಕ್ ಉತ್ಪನ್ನಗಳು ಲಭ್ಯವಿದೆ. ಆಸಕ್ತರಿಗೆ ವಿವಿಧ ತಳಿಯ ಹಣ್ಣಿನ ಗಿಡಗಳು, ತರಕಾರಿ ಬೀಜಗಳು ಹಾಗೂ ಹೂವಿನ ಗಿಡಗಳು ಲಭ್ಯವಿರಲಿದೆ.
ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ರೇಷ್ಮೆ ಸೀರೆಗಳನ್ನು (ಜರಿ ಇರುವಂಥದ್ದು) ಇಲ್ಲಿ ನೀಡಿ ಹಣವನ್ನು ಪಡೆಯಬಹುದಾಗಿದೆ. ಅಲ್ಲದೇ ಮೇಳದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಹಲಸಿನ ಹಣ್ಣಿನ ಒಂದು ಜಿಲೇಬಿ ಉಚಿತವಾಗಿ ನೀಡಲಾಗುವುದು. ಜೊತೆಗೆ ಸೆಲ್ಪಿಸ್ಟ್ಯಾಂಡ್ನಲ್ಲಿ ಪೋಟೊ ತೆಗೆದು ವಾಟ್ಸ್ಪ್ ಸ್ಟೇಟಸ್ ಹಾಕಿದ ಪ್ರತಿಯೊಬ್ಬರಿಗೆ 'ಸದ್ಗುರು ಆಯುರ್ವೇದ ಗ್ರಾಮ್ ಪ್ಲೋರ್' ಸಾಬೂನು ಉಚಿತವಾಗಿ ದೊರೆಯಲಿದೆ. ಮೇಳವು ಬೆಳಗ್ಗೆ 10 ರಿಂದ ರಾತ್ರಿ 9.30ರ ವರೆಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಂದ್ಯೋಡು ಬಳಿಯ ಪಚ್ಚಂಬಳದಲ್ಲಿ ಪ್ರಥಮ ಬಾರಿ ನಡೆಯುವ ಹಲಸು ಮೇಳದ ಯಶಸ್ವಿಗೆ ಸಹಕರಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



