ಛತ್ರಪತಿ ಸಂಭಾಜಿನಗರ : 'ನಾನು ಪಡೆದ ವಿದ್ಯಾರ್ಥಿವೇತನ ಹಾಗೂ ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಮಾಡಿದ ಸಾಲದ ದಾಖಲೆಗಳನ್ನು ತೋರಿಸಲು ಸಿದ್ಧನಿದ್ದೇನೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪದವಿ ಶಿಕ್ಷಣದ ದಾಖಲೆಗಳನ್ನು ಬಹಿರಂಗಪಡಿಸುತ್ತಾರೆಯೇ?' ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಸವಾಲು ಹಾಕಿದ್ದಾರೆ.
ದೀಪ್ಕೆ ತಂದೆ ನಿವೃತ್ತ ಸರ್ಕಾರಿ ಉದ್ಯೋಗಿ. ಅವರು ತಮ್ಮ ಮಗನಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಿದ್ದಾರೆ. ಆದ್ದರಿಂದ ಅವರ ಹಣಕಾಸಿನ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಸೂರತ್ನ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಕಾರ್ಯಕರ್ತರೊಬ್ಬರು ಆಗ್ರಹಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ದೀಪ್ಕೆ 'ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ನನಗೆ ವಿದ್ಯಾರ್ಥಿವೇತನ ಸಿಕ್ಕಿದೆ. ಅಲ್ಲಿ ನಾನು ಶೈಕ್ಷಣಿಕ ಸಾಲ ಪಡೆದುಕೊಂಡಿದ್ದೇನೆ. ಅದನ್ನು ಮರುಪಾವತಿ ಮಾಡಬೇಕಿದೆ. ಪ್ರತಿಯೊಬ್ಬರೂ ಈ ಬಗ್ಗೆ ಸ್ವತಂತ್ರವಾಗಿ ಪರಿಶೀಲನೆ ನಡೆಸಬಹುದು' ಎಂದು ಸೋಮವಾರ ಹೇಳಿದರು.
'ಮೋದಿ ಅವರು ತಮ್ಮ ಪದವಿ ಕುರಿತ ಮಾಹಿತಿಯನ್ನು ಸಾರ್ವಜನಿಕಗೊಳಿಸಿದರೆ ನಾನೂ ನನ್ನ ಶಿಕ್ಷಣದ ಕುರಿತಾದ ದಾಖಲೆಗಳನ್ನು ಬಹಿರಂಗಪಡಿಸುತ್ತೇನೆ' ಎಂದರು.
'ಈ ಸರ್ಕಾರದ ವಿರುದ್ಧ ದನಿ ಎತ್ತುವವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರೀಯ ತನಿಖಾ ದಳಗಳನ್ನು (ಸಿಬಿಐ) ಛೂ ಬಿಡಲಾಗುತ್ತದೆ. ಈ ಸಂಸ್ಥೆಗಳು ನನ್ನ ಮನೆಗೂ ಬಂದು ತನಿಖೆ ನಡೆಸಲಿ. ನನ್ನ ದಾಖಲೆಗಳನ್ನು ತೋರಿಸಲು ನಾನು ಸಿದ್ಧ. ಇ.ಡಿಯನ್ನು ಕಳುಹಿಸುವ ಮೋದಿ, ತಮ್ಮ ಪದವಿಯನ್ನೂ ಕಳುಹಿಸಬೇಕು. ನನ್ನ ಪದವಿ ಶಿಕ್ಷಣ ಅಧಿಕೃತವಾಗಿದೆ. ಮೋದಿಯವರದ್ದೂ ಹೀಗೆಯೇ ಇರುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ' ಎಂದು ದೀಪ್ಕೆ ಹೇಳಿದರು.
ಸಿಜೆಪಿಯು ರಾಜಕೀಯ ಪಕ್ಷವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 'ಈಗಾಗಲೇ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳಿಂದ ಮಾಧ್ಯಮಗಳು ನಿರಾಸೆಗೊಂಡಿವೆ ಎಂದು ಭಾವಿಸುತ್ತೇನೆ. ಸದ್ಯಕ್ಕೆ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶ ಇಲ್ಲ. ಸಂಘಟನೆಯನ್ನು ಸಾರ್ವಜನಿಕ ಚಳವಳಿಯಾಗಿಯೇ ಮುಂದುವರಿಸಿಕೊಂಡು ಹೋಗುತ್ತೇವೆ' ಎಂದರು.
'ಮತಗಳ್ಳತನ ನಡೆಯುತ್ತಿರುವಾಗ ರಾಜಕೀಯ ಪಕ್ಷವಾಗಿ ನಾವು ಏನು ಮಾಡುತ್ತೇವೆ. ಜನರು ಬೆಳಗ್ಗೆ ಯಾರಿಗೋ ಮತ ಹಾಕಿರುತ್ತಾರೆ. ಸಂಜೆ ಇನ್ಯಾರೋ ಸರ್ಕಾರ ರಚಿಸಿರುತ್ತಾರೆ. ಆದ್ದರಿಂದ ಜನರು ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಶಾಸಕರು ಮತ್ತು ಸಂಸದರು ಪಕ್ಷಾಂತರ ಮಾಡುತ್ತಾರೆ. ಇ.ಡಿ ಮತ್ತು ಸಿಬಿಐಗಳನ್ನು ಕಳುಹಿಸುವ ಮೂಲಕ ರಾಜಕೀಯ ಪಕ್ಷಗಳನ್ನು ನಾಶ ಮಾಡುವಾಗ, ರಾಜಕೀಯ ಪಕ್ಷವಾಗಿ ಏನು ಪ್ರಯೋಜನ' ಎಂದು ಪ್ರಶ್ನಿಸಿದರು.
- ಅಭಿಜೀತ್ ದೀಪ್ಕೆ ಸಿಜೆಪಿ ಸಂಸ್ಥಾಪಕಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಈ ಸರ್ಕಾರವು ಶಿಕ್ಷಣಕ್ಕೆ ಕಡಿಮೆ ವೆಚ್ಚ ಮಾಡುತ್ತಿರುವುದು ದುರದೃಷ್ಟಕರ. ಶಿಕ್ಷಣವೇ ದೇಶದ ತಳಪಾಯ. ಆದ್ದರಿಂದ ಈ ಕ್ಷೇತ್ರಕ್ಕೆ ಗರಿಷ್ಠ ನಿಧಿ ಬಳಸಬೇಕು
ಬಾಂಗ್ಲಾ ನೇಪಾಳ ದಂಗೆಗೆ ಹೋಲಿಸಬೇಡಿ
ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೀಪ್ಕೆ 'ಇಡೀ ಪ್ರಪಂಚಕ್ಕೇ ಸ್ಫೂರ್ತಿಯಾಗಿದ್ದ ಮಹಾತ್ಮ ಗಾಂಧಿಯವರೇ ನಮ್ಮವರಾಗಿರುವಾಗ ಬಾಂಗ್ಲಾದೇಶ ಅಥವಾ ನೇಪಾಳವನ್ನು ಅನುಸರಿಸುವ ಅಗತ್ಯ ನಮಗಿಲ್ಲ. ನಮ್ಮ ಮಾನಹಾನಿ ಮಾಡಲು ನಮ್ಮ ಹೋರಾಟವನ್ನು ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗೆ ಹೋಲಿಸಲಾಗುತ್ತಿದೆ. ನಾವು ಅವರಲ್ಲ. ನಾವು ಸಂವಿಧಾನವನ್ನು ಅನುಸರಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ' ಎಂದರು. ನೀಟ್ ಅಕ್ರಮವನ್ನು ವಿರೋಧಿಸಿ ಇತ್ತೀಚೆಗೆ ಭಾರತದಲ್ಲಿ ನಡೆದ ಪ್ರತಿಭಟನೆಯನ್ನು ತಸ್ಲಿಮಾ ಅವರು ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ಬಾಂಗ್ಲಾದೇಶದ ದಂಗೆ ಹಾಗೂ ನೇಪಾಳದಲ್ಲಿ ನಡೆದಿದ್ದ ಜೆನ್ ಝೀ ಪ್ರತಿಭಟನೆಗೆ ಹೋಲಿಕೆ ಮಾಡಿದ್ದರು. 'ಬಾಂಗ್ಲಾದಲ್ಲಿ ನಡೆದ ದಂಗೆ ನಮ್ಮನ್ನು ಮೂರ್ಖರನ್ನಾಗಿಸಿತು' ಎಂದಿದ್ದರು. 'ನೀಟ್ ಅಕ್ರಮ ವಿರೋಧಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಮಹಾರಾಷ್ಟ್ರ ಸರ್ಕಾರ ಹಿಂಪಡೆಯುತ್ತದೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಿದ್ದಕ್ಕೆ 15 ವರ್ಷದ ರುಚಿಕಾ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವುದಾದರೆ ಬಿಜೆಪಿ ನಾಯಕರ ವಿರುದ್ಧವೂ ಎಫ್ಐಆರ್ ದಾಖಲಿಸಬೇಕು. ಭಾರತದಲ್ಲಿ ಶಿಕ್ಷಣವು ಸಾಮಾನ್ಯ ಜನರ ಕೈಗೆ ಎಟುಕುವುದಿಲ್ಲ. ಈಗ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಸಿಜೆಪಿಯನ್ನು ವಿಸ್ತರಿಸಲಾಗುವುದು' ಎಂದರು.

