ನವದೆಹಲಿ: 'ಹದಿನೈದು ದಿನ ಕಳೆದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸದನಕ್ಕೆ ಬರುವ ಧೈರ್ಯ ಬಂದಿಲ್ಲ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ಗಳಿಂದ ಗುಂಡು ಹಾರಿಸಲು ಅನುಮತಿ ನೀಡಿದವರು ಯಾರು ಎಂಬುದನ್ನು ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಬೇಕು' ಎಂದು ಒತ್ತಾಯಿಸಿದ್ದಾರೆ.
'ದೆಹಲಿಯಲ್ಲಿ ನಿಮ್ಮ (ವಿದ್ಯಾರ್ಥಿಗಳು) ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ಗೃಹ ಸಚಿವರಿಗಾಗಲಿ ಅಥವಾ ಪ್ರಧಾನ ಮಂತ್ರಿಗಳಿಗಾಗಲಿ ಆಸಕ್ತಿ ಇಲ್ಲ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು' ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಹುಲ್ ಹೇಳಿದ್ದಾರೆ.
ಮುಂದುವರಿದು, 'ಪೆಲೆಟ್ ಗನ್ ಬಳಕೆಗೆ ಅವರು(ಅಮಿತ್ ಶಾ) ಆದೇಶ ನೀಡಿದ್ದೇ ಹೌದಾದರೆ ಆ ತಕ್ಷಣ ಅವರು ಅಪರಾಧಿ ಎನಿಸಿಕೊಳ್ಳುತ್ತಾರೆ. ಅವರ ಗಮನಕ್ಕೆ ಬಾರದೇ ಇದು ನಡೆದಿದ್ದರೆ, ತಮ್ಮ ಹುದ್ದೆಗೆ ಅಸಮರ್ಥರಾಗುತ್ತಾರೆ. ಏನೇ ಆದರೂ ಅವರು ಹುದ್ದೆಯಿಂದ ಕೆಳಗಿಳಿಯಬೇಕು' ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ರಾಮಮಂದಿರ ದೇಣಿಗೆ ಕಳ್ಳತನ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷಗಳು ಬಯಸಿದ್ದವು ಎಂದಿದ್ದಾರೆ.
'ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ನಾವು ಅವರ ಮೇಲೆ ಒತ್ತಡ ಹೇರುತ್ತಲೇ ಇದ್ದೆವು. ಆದರೆ ಅವರು (ಅಮಿತ್ ಶಾ) ಸದನಕ್ಕೆ ಬರಲಿಲ್ಲ. ರಾಮ ಮಂದಿರದ ದೇಣಿಗೆ ಕಳ್ಳತನದ ಬಗ್ಗೆ ಪ್ರಧಾನಿ ಮೋದಿ ಅವರು ಹೇಳಿಕೆ ನೀಡಬೇಕೆಂದು ಆಗ್ರಹಿಸಿದ್ದೆವು. ಸರ್ಕಾರ ಅದಕ್ಕೂ ಕಿವಿಗೊಡಲಿಲ್ಲ' ಎಂದು ಹೇಳಿದ್ದಾರೆ.

