ನವದೆಹಲಿ: ಡಾಬರ್ ಕಂಪನಿಯ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್ಎಸ್ಎಸ್ಎಐ) ವಿಧಿಸಿದ್ದ ನಿರ್ಬಂಧಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಕಂಪನಿಯು ಉತ್ಪಾದಿಸುವ ಜೇನು ತುಪ್ಪ, ಹಸುವಿನ ತುಪ್ಪ, ಖಾದ್ಯ ತೈಲಗಳು ಸೇರಿದಂತೆ ಇತರೆ ಉತ್ಪನ್ನಗಳು ಶೇ 100ರಷ್ಟು ಪರಿಶುದ್ಧವಾಗಿವೆ ಎಂದು ತನ್ನ ವೆಬ್ಸೈಟ್ ಪ್ರಕಟಿಸಿತ್ತು.
ಇದು 2018ರ ಆಹಾರ ಸುರಕ್ಷತಾ ನಿಯಮಾವಳಿಯ ಉಲ್ಲಂಘನೆಯಾಗಲಿದೆ. ಜತೆಗೆ ಗ್ರಾಹಕರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಪ್ರಾಧಿಕಾರವು ಡಾಬರ್ ಉತ್ಪನ್ನಗಳ ಮಾರಾಟ ಮೇಲೆ ನಿರ್ಬಂಧನೆ ಹೇರಿತ್ತು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರಿದ್ದ ಪೀಠವು, ಕಂಪನಿಯ ವಾದ ಆಲಿಸದೆ, ಎಫ್ಎಸ್ಎಸ್ಎಐ ನಿಷೇಧಾಜ್ಞೆಯನ್ನು ಹೊರಡಿಸಬಾರದಿತ್ತು ಎಂದು ಅಭಿಪ್ರಾಯಪಟ್ಟು, ನಿರ್ಬಂಧವನ್ನು ತಡೆಹಿಡಿದಿದೆ. ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

