ನವದೆಹಲಿ: ಅಂತರರಾಷ್ಟ್ರೀಯ ಸಮುದಾಯಗಳು ಮಧ್ಯಪ್ರವೇಶಿಸದಿದ್ದರೆ ಬಾಂಗ್ಲಾದೇಶವು ಪ್ರಾದೇಶಿಕ ಭಯೋತ್ಪಾದಕರ ಉತ್ಪಾದನೆಯ ಕೇಂದ್ರವಾಗುವ ಅಪಾಯವಿದೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಮಗ, ಅವಾಮಿ ಲೀಗ್ ನಾಯಕ ಸಾಜೀದ್ ವಾಜಿದ್ ಜಾಯ್ ಹೇಳಿದ್ದಾರೆ. ಬಾಂಗ್ಲಾ ವಿಫಲ ದೇಶವಾಗುವತ್ತ ಸಾಗಿದೆ ಎಂದಿದ್ದಾರೆ.
ಅಮೆರಿಕದ ಮೇರಿಲ್ಯಾಂಡ್ನಿಂದ ನವದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಜೊತೆ ವರ್ಚುವಲ್ ಆಗಿ ಮಾತನಾಡಿರುವ ಅವರು, ಬಾಂಗ್ಲಾದೇಶದಲ್ಲಿ ವಿದೇಶಿ ಗುಪ್ತಚರ ಸಂಸ್ಥೆಗಳ ಕೈವಾಡ ಕಾಣುತ್ತಿದೆ. ಅದರಲ್ಲೂ ಪಾಕಿಸ್ತಾನದ ಐಎಸ್ಐನ ನೇರ ಹಸ್ತಕ್ಷೇಪವಿದೆ ಎಂದು ದೂರಿದ್ಧಾರೆ.
ಶಿಕ್ಷೆಗೆ ಗುರಿಯಾಗಿದ್ದ ನೂರಾರು ಭಯೋತ್ಪಾದಕರು, ಅವಾಮಿ ಲೀಗ್ ಸರ್ಕಾರವಿದ್ದಾಗ ಬಂಧಿಸಿ ಜೈಲಿಗಟ್ಟಲಾಗಿದ್ದ ಕ್ರಿಮಿನಲ್ಗಳನ್ನು ಬಿಡುಗಡೆ ಮಾಡಲಾಗಿದೆ. ನಿಷೇಧಿತ ಹಿಜ್ಬ್ ಉಟ್ ತಾಹ್ರೀರ್ ಸಂಘಟನೆಯ ಸದಸ್ಯರು ಬಹಿರಂಗ ರ್ಯಾಲಿ ನಡೆಸುತ್ತಿದ್ದಾರೆ. ಅಲ್ ಕೈದಾ ಸಹ ಸಾರ್ವಜನಿಕ ರ್ಯಾಲಿಗಳನ್ನು ನಡೆಸುತ್ತಿದೆ ಎಂದು ದೂರಿದ್ಧಾರೆ.
'ಭಾರತಕ್ಕೆ ಇದು ಕಳವಳಕಾರಿ ವಿಷಯವಾಗಿದೆ. ಅದರ ಪೂರ್ವಕ್ಕೆ ಮತ್ತೊಂದು ಪಾಕಿಸ್ತಾನ ರೂಪುಗೊಂಡಿದೆ. ನಿಮ್ಮ ದೇಶದ ಬದಿಯಲ್ಲೇ ಮತ್ತೊಂದು ಪಾಕ್ ಇದೆ. ಅಲ್ ಕೈದಾ ಭಯೋತ್ಪಾದಕ ಸಂಘಟನೆಯನ್ನು ನಡೆಸುವವರು ಬಹಿರಂಗ ರ್ಯಾಲಿ ಕೈಗೊಳ್ಳುತ್ತಿದ್ದಾರೆ. ಇದೇ ನೋಡಿ ಬಾಂಗ್ಲಾದೇಶದಲ್ಲಿ ಆಗುತ್ತಿರುವುದು. ಈ ಬೆಳವಣಿಗೆ ಭಾರತಕ್ಕಾಗಲಿ ಅಥವಾ ಇಡೀ ಜಗತ್ತಿಗಾಗಲಿ ಒಳ್ಳೆಯ ಸಂಕೇತವಲ್ಲ' ಎಂದಿದ್ದಾರೆ.
ಬಾಂಗ್ಲಾದಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಗೆ ತಡೆ ಹಾಕದಿದ್ದರೆ ಮುಂದಿನ ಪೀಳಿಗೆಯ ಜಾಗತಿಕ ಭಯೋತ್ಪಾದಕರು ಬಾಂಗ್ಲಾದೇಶದಿಂದ ಬರುತ್ತಾರೆ. ತಮ್ಮ ಹೇಳಿಕೆಯನ್ನು ಕೇವಲ ಸಾಂದರ್ಭಿಕ ಎಂದು ಪರಿಗಣಿಸದೇ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುವಂತೆ ಪತ್ರಕರ್ತರಿಗೆ ಅವರು ಮನವಿ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ಸಂಸತ್ ಚುನಾವಣೆ ನಡೆದು ಬಾಂಗ್ಲಾದೇಶದ ರಾಷ್ಟ್ರೀಯವಾದಿ ಪಕ್ಷವು(ಬಿಎನ್ಪಿ) ಅಧಿಕಾರಕ್ಕೆ ಬಂದು 6 ತಿಂಗಳ ಬಳಿಕ ಹಸೀನಾ ಮಗ ಜಾಯ್ ಹೇಳಿಕೆ ಬಂದಿದೆ.
ಅಭೂತಪೂರ್ವ ಬಹುಮತದ ಮೂಲಕ ತಾರಿಕ್ ರೆಹಮಾನ್ ನೇತೃತ್ವದ ಬಿಎನ್ಪಿ ಅಧಿಕಾರಕ್ಕೆ ಬಂದಿತ್ತು. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರದ ಅಂತ್ಯದ ಬಳಿಕ ತಾರಿಕ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಮೊಹಮ್ಮದ್ ಯೂನಸ್ ಆಡಳಿತವಿದ್ದಾಗ ಅವಾಮಿ ಲೀಗ್ ಪಕ್ಷಕ್ಕೆ ನಿಷೇಧ ಹೇರಲಾಗಿತ್ತು. ಯಾವುದೇ ಚಟುವಟಿಕೆ ನಡೆಸದಂತೆ ನಿರ್ಬಂಧ ವಿಧಿಸಲಾಗಿತ್ತು. ಅದೇ ನಿರ್ಬಂಧ ಈಗಲೂ ಮುಂದುವರಿದಿದೆ.
ಭದ್ರತೆ ವಿಚಾರ ಮಾತ್ರವಲ್ಲದೆ, ಇತರೆ ಹಲವು ವಿಷಯಗಳನ್ನು ಜಾಯ್ ಪ್ರಸ್ತಾಪಿಸಿದ್ದಾರೆ. ತಮ್ಮ ತಾಯಿ ಹೊರಹೋಗಲು ಕಾರಣವಾದ 2024ರ ಜುಲೈ-ಆಗಸ್ಟ್ ತಿಂಗಳ ಗಲಭೆ ಮತ್ತು ಗಲಭೆ ಸಂದರ್ಭದ ಸಾವಿನ ಸಂಖ್ಯೆಯನ್ನು ಅವರು ಅಲ್ಲಗಳೆದಿದ್ದಾರೆ. ಸಾವಿನ ಸಂಖ್ಯೆ ಕುರಿತಂತೆ ವಿಶ್ವಸಂಸ್ಥೆ ಮತ್ತು ಸರ್ಕಾರದ ಲೆಕ್ಕದಲ್ಲಿ ಭಾರಿ ವ್ಯತ್ಯಾಸವಿದೆ ಎಂದಿದ್ದಾರೆ.

