ಬದಿಯಡ್ಕ: ಆಂಗ್ಲ ಭಾಷೆಯಲ್ಲಿ ಎಂ.ಎ. ವ್ಯಾಸಂಗಗೈದು, ಅಧ್ಯಾಪಕಿಯಾಗಿ ವೃತ್ತಿಜೀವನ ಆರಂಭಿಸಬೇಕಿದ್ದ ಅಶ್ವಿನಿ ಕೆ.ಎಮ್. ಅವರು ಅನಿರೀಕ್ಷಿತವಾಗಿ ರಾಜಕೀಯ ವಲಯಕ್ಕೆ ಬಂದರು. ಕಳೆದ ಚುನಾವಣೆಯಲ್ಲಿ ಪೆರಡಾಲ ಬ್ಲಾಕ್ ಡಿವಿಷನ್ನಿಂದ ಗೆದ್ದು ಪ್ರಥಮ ಬಾರಿಗೆ ಬ್ಲಾಕ್ ಪಂಚಾಯಿತಿ ಸದಸ್ಯರಾಗಿ ಜನಮನ ಗೆದ್ದರು. ಬಾಲ್ಯದಲ್ಲಿಯೇ ನೃತ್ಯವನ್ನೂ ಕರಗತಮಾಡಿಕೊಂಡಿರುವ ಇವರು ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದು `ವಿದುಷಿ ಅಶ್ವಿನಿ'ಯಾಗಿ ಹಲವು ಶಿಷ್ಯರಿಗೆ ನೃತ್ಯಧಾರೆ ಎರೆದ ಕಲಾವಿದೆ. ಈ ಬಾರಿಯ ತ್ರಿಸ್ತರ ಪಂಚಾಯಿತಿ ಚುನಾವಣೆಯಲ್ಲಿ ಪ್ರಬಲ ಪೈಪೋಟಿಯ ಪೆರಡಾಲ ವಾರ್ಡಿನಿಂದ ಸ್ಪರ್ಧಿಸಿ ಬದಿಯಡ್ಕ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದರು. ಅದೃಷ್ಟದ ಮೂಲಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಇವರು ಆಯ್ಕೆಯಾದರು.
ಅಧಿಕಾರ ವಹಿಸಿಕೊಂಡ ಅವರು, ತಮ್ಮ ಕ್ಷೇತ್ರದ ಪೆರಡಾಲ ಕೊರಗ ಉನ್ನತಿಯ ಕಲಿಕಾ ಕೇಂದ್ರದಲ್ಲಿ ಸರ್ಕಾರದ ಸಮಗ್ರ ಶಿಕ್ಷಾ ಅಭಿಯಾನದ ತರಗತಿಗಳು, ಕುಟುಂಬಶ್ರೀ ಬ್ರಿಡ್ಜ್ ಕೋರ್ಸ್ ತರಗತಿಗಳು ನಡೆಯದೆ ಇದ್ದ ಸಂದರ್ಭ ಮಕ್ಕಳು ಪರದಾಡುತ್ತಿದ್ದಾಗ ಸುಮ್ಮನಿರಲಿಲ್ಲ. ಜನಸೇವೆಯೊಂದಿಗೆ ಕೊರಗ ಉನ್ನತಿಯ ಮಕ್ಕಳ ಉನ್ನತಿಯನ್ನು ಬಯಸಿದ ಅವರು ಪರೀಕ್ಷೆ ಹತ್ತಿರವಾಗುತ್ತಿರುವ ಇದೀಗ ಪಾಠ ಮಾಡಲು ಯಾರೂ ಇಲ್ಲದ ಸನ್ನಿವೇಶದಲ್ಲಿ, ತಮ್ಮ ಕಾರ್ಯದೊತ್ತಡದ ನಡುವೆಯೂ ವಾರದಲ್ಲಿ ಒಂದು ದಿನವನ್ನು ಆ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದಾರೆ. 2019ರಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡು, ಇಂದು ಉನ್ನತಿಯ ಮಕ್ಕಳಿಗೆ ಸ್ವತಃ ತಾವೇ ಶಿಕ್ಷಕಿಯಾಗಿ ಪಾಠ ಹೇಳಿಕೊಡುತ್ತಿದ್ದಾರೆ.
"ತನಗೆ ತಿಳಿದದ್ದನ್ನು ಹತ್ತು ಜನರಿಗೆ ಧಾರೆ ಎರೆಯುವುದರಲ್ಲಿ ಸಂತೋಷ ಕಾಣುವವರೇ ನಿಜವಾದ ಮಾರ್ಗದರ್ಶಿ." ಪಾಠ ಮುಗಿಸಿ ಹೊರಬರುವಾಗ ಆ ಕಂದಮ್ಮಗಳ ಕಣ್ಣಲ್ಲಿ ಕಂಡ ಬೆಳಕು ಮತ್ತು ಬಾಯಿಂದ ಬಂದ ಪ್ರೀತಿಯ ಮಾತುಗಳೇ ಇವರ ಈ ಸಾರ್ಥಕ ಸೇವೆಗೆ ಸಾಕ್ಷಿ. ಜನಪ್ರತಿನಿಧಿಯಾಗಿ ಮಾತ್ರವಲ್ಲದೆ, ನಿಜವಾದ `ಗುರು'ವಾಗಿ ಮಾದರಿಯಾದ ವಿದುಷಿ ಅಶ್ವಿನಿ ಕೆ.ಎಮ್. ಅವರ ಜನಪರ ಕಾಳಜಿ ಇದೀಗ ಶ್ಲಾಘನೀಯವಾಗಿದೆ.

.jpg)
.jpg)
