ಗೊಂಡಾ/ ಅಯೋಧ್ಯೆ: 'ಆರು ಮಹಿಳಾ ಕುಸ್ತಿಪಟುಗಳು ತಮ್ಮ ವಿರುದ್ಧ ಹೊರಿಸಿದ ಲೈಂಗಿಕ ಕಿರುಕುಳ ಪ್ರಕರಣವು ರಾಜಕೀಯ ಪ್ರೇರಿತವಾದುದು. ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ ಎಂಬುದು ಆರೋಪಕ್ಕಷ್ಟೇ ಸೀಮಿತವಾಗಿದೆ. ಅದರ ಹೊರತಾಗಿ ಏನೂ ಇಲ್ಲ' ಎಂದು ಬಿಜೆಪಿ ನಾಯಕ ಮತ್ತು ಭಾರತೀಯ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯವು ಖುಲಾಸೆಗೊಳಿಸಿದ ನಂತರ ಗೊಂಡಾದ ನಂದಿನಿ ನಗರ ಕಾಲೇಜಿನಲ್ಲಿ ಆಯೋಜಿಸಿದ್ದ 'ಸತ್ಯಮೇವ ಜಯತೇ' ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
'ನಾನು ಯಾರ ಸೀರೆಯನ್ನೂ ಎಳೆದಿರಲಿಲ್ಲ. ಕುಸ್ತಿಪಟುಗಳ ಕತ್ತಿಗೆ ಪದಕ ಹಾಕುವ ವೇಳೆ ಅವರ ದೇಹ ತಾಗಿರಬಹುದು. ಈ ವಿಷಯವನ್ನೇ ದೊಡ್ಡ ವಿವಾದವನ್ನಾಗಿ ಮಾಡಿದರು. ನನ್ನ ಮೇಲಿನ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತ' ಎಂದು ಹೇಳಿದ್ದಾರೆ.
'ಒತ್ತಡಕ್ಕೆ ಮಣಿಯುವ ಮೂಲಕ ವಿವಾದವನ್ನು ಬಗೆಹರಿಸಬಹುದಿತ್ತು. ಆದರೂ ಬಿಟ್ಟುಬಿಟ್ಟೆ. ಆರೋಪದ ಸಂದರ್ಭದಲ್ಲಿ ನಾನು ತಲೆಬಾಗಿದ್ದರೆ, ಪ್ರಕರಣ ಕೊನೆಯಾಗುತ್ತಿತ್ತು. ಆದರೆ ನನಗೆ ಮಾನಹಾನಿಯಾಗುತ್ತಿತ್ತು' ಎಂದು ಹೇಳಿದ್ದಾರೆ.
'ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಿಶ್ವದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಚಳವಳಿ ನಡೆದಿರಲಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧವೂ ಇಷ್ಟೊಂದು ದೊಡ್ಡ ಹೋರಾಟ ನಡೆದಿರಲಿಲ್ಲ' ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿವರಿಸಿದ್ದಾರೆ.
2029ಕ್ಕೆ ಸ್ಪರ್ಧೆ ಖಚಿತ: 'ಉತ್ತರ ಪ್ರದೇಶದ ಪೂರ್ವಭಾಗದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಸಾಕಷ್ಟು ರಾಜಕೀಯ ಪ್ರಭಾವ ಹೊಂದಿದ್ದು, 2029ರ ಲೋಕಸಭಾ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಈಗಾಗಲೇ ಹಲವು ಬಾರಿ ನಿರ್ಧಾರ ಪ್ರಕಟಿಸಿದ್ದಾರೆ. ಒಂದೊಮ್ಮೆ ಟಿಕೆಟ್ ನೀಡದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ' ಎಂದು ಪುನರುಚ್ಚರಿಸಿದ್ದಾರೆ.
ಅದ್ಧೂರಿ ಸ್ವಾಗತ: ಪ್ರಕರಣದಿಂದ ಖುಲಾಸೆಗೊಂಡು ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಅಭಿಮಾನಿಗಳು ಡ್ರಮ್ ಹೊಡೆದು, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು. ಬುಲ್ಡೋಜರ್ಗಳನ್ನು ಬಳಸಿ, ಹೂಗಳನ್ನು ಹಾಕಿ ಬರಮಾಡಿಕೊಂಡರು.
ಅಲ್ಲಿಂದ ಹನುಮಾನ್ ನಗರಕ್ಕೆ ತೆರಳಿ, ಸ್ವಾಮೀಜಿಗಳ ಆಶೀರ್ವಾದ ಪಡೆದು ದೇವರಿಗೆ ಪೂಜೆ ಸಲ್ಲಿಸಿದರು. ಪ್ರಕರಣದಿಂದ ಖುಲಾಸೆಗೊಂಡ ಕಾರಣ, ಅಭಿಮಾನಿಗಳು 40 ಕ್ವಿಂಟಲ್ ಲಾಡು ಹಂಚಿ ಸಂಭ್ರಮಿಸಿದರು.

