ಪ್ರತಾಪಗಢ: ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಮನೆ ಕುಸಿದು ಇಬ್ಬರು ನವಜಾತ ಶಿಶುಗಳು ಸೇರಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ. ಬಾರಾಬಂಕಿ ಮತ್ತು ಸಹಾರನ್ಪುರ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಪ್ರತಾಪಗಢ ಜಿಲ್ಲಾ ಕೇಂದ್ರದಿಂದ ಮೂರು ಕಿ.ಮೀ. ಅಂತರದಲ್ಲಿರುವ ಮುಹಲಿ ಬಜಾರ್ನಲ್ಲಿ ಗುರುವಾರ ನಸುಕಿನಲ್ಲಿ ದುರ್ಘಟನೆ ಸಂಭವಿಸಿದೆ. ಧಾರಾಕಾರ ಮಳೆ ಸುರಿದಿದ್ದರಿಂದ, ಶಿಥಿಲಗೊಂಡಿದ್ದ ಶತಮಾನದಷ್ಟು ಹಳೆಯದಾದ ಮನೆಯು ಕುಸಿದುಬಿದ್ದಿದೆ. ಮನೆಯಲ್ಲಿ ಒಟ್ಟು 7 ಮಂದಿ ಮಲಗಿದ್ದರು. ಅಮನ್ (28) ಎಂಬ ಒಬ್ಬ ವ್ಯಕ್ತಿ ಮಾತ್ರ ಬದುಕಿ ಉಳಿದಿದ್ದಾರೆ ಎಂದು ಪ್ರತಾಪಗಢ ವೃತ್ತದ ಪೊಲೀಸ್ ಅಧಿಕಾರಿ ಅಶುತೋಶ್ ಮಿಶ್ರಾ ತಿಳಿಸಿದ್ದಾರೆ.
ಪ್ರಮೋದ್ ಶ್ರೀವಾಸ್ತವ (60), ರೀತಾ (55), ನಿತಿನ್ (25), ಮಾಧುರಿ (24), ಮಾಧವ್ (2), ಅದ್ವಿಕ್ (1) ಮೃತಪಟ್ಟವರು. ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದರು.
ಬಾರಾಬಂಕಿ ಜಿಲ್ಲೆಯ ಅಲಿಯಾಬಾದ್ ಗ್ರಾಮದಲ್ಲಿ ಹಳೆಯ ಇಟ್ಟಿಗೆ ಗೋಡೆಯೊಂದು ಕುಸಿದು ಇಬ್ಬರು ಬಾಲಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡು ಅವಶೇಷಗಳಡಿ ಸಿಲುಕಿದ್ದ ಮಕ್ಕಳನ್ನು ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.
'ಗೋಡೆಯು ಶಿಥಿಲಾವಸ್ಥೆಯಲ್ಲಿತ್ತು. ಸತತ ಮಳೆಯಿಂದಾಗಿ ಯಾವಾಗ ಬೇಕಿದ್ದರೂ ಕುಸಿಯುವ ಅಪಾಯ ಇತ್ತು. ಮಕ್ಕಳು ಇದೇ ಸ್ಥಳದಲ್ಲಿ ಆಟ ಆಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ' ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸಹಾರನ್ಪುರ ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಮನೆ ಕುಸಿದು 35 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
- ಮಳೆ ಹಾನಿ ಪ್ರಕರಣಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪರಿಹಾರ ಕಾರ್ಯವನ್ನು ಜಿಲ್ಲಾಡಳಿತಗಳು ತ್ವರಿತವಾಗಿ ಕೈಗೊಳ್ಳಬೇಕು. ಅವಘಡ ಸಾಧ್ಯತೆ ಇರುವ ಪ್ರದೇಶಗಳ ಮೇಲೆ ನಿಗಾ ವಹಿಸಬೇಕು.
-ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿ

