ನವದೆಹಲಿ: ಯುವಕರ ಕನಸುಗಳನ್ನು ಹೊಸಕಿ ಹಾಕಿ ಅವರನ್ನು ಪ್ರತಿಭಟನೆಗೆ ಬೀದಿಗೆ ಬರುವಂತಹ ಪರಿಸ್ಥಿತಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ತಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಶನಿವಾರ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರ್ಕಾರವು ಹಿಂದಿನ ಆಡಳಿತಗಳ ಸಾಧನೆಗಳ ಶ್ರೇಯಸ್ಸನ್ನು ಪಡೆದುಕೊಳ್ಳುತ್ತಿದೆ, ಆದರೆ ಸಂಸತ್ತಿಗೆ ಉತ್ತರದಾಯಿಯಾಗಿಲ್ಲ ಎಂದು ಟೀಕಿಸಿದ್ದಾರೆ.
'ಬಡವರ ಧ್ವನಿಗೆ ಬೆಲೆ ಸಿಗುವ, ರೈತರು ಗೌರವದಿಂದ ಮುಂದೆ ಸಾಗುವ, ಯುವಕರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಮತ್ತು ಅಧಿಕಾರದಲ್ಲಿರುವವರ ವಿರುದ್ಧ ಸತ್ಯ ಹೇಳಲು ಯಾರೂ ಹೆದರದ ಭಾರತ ನಿರ್ಮಾಣವಾಗಬೇಕು. ಸ್ವಾತಂತ್ರ್ಯ ಹೋರಾಟಗಾರರ ಕನಸೂ ಇದೇ ಆಗಿತ್ತು' ಎಂದು ಅವರು ಹೇಳಿದ್ದಾರೆ..
ಬಿಜೆಪಿ ಮತ್ತು ಆರ್ಎಸ್ಎಸ್ ಸಮಾಜದಲ್ಲಿ ದ್ವೇಷ ಮತ್ತು ವೈಮನಸ್ಸು ಸೃಷ್ಟಿಸುವ ಮೂಲಕ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರನ್ನು ದುರ್ಬಲಗೊಳಿಸುವ ನೀತಿಗಳನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
21ನೇ ಶತಮಾನದಲ್ಲಿ ಸಾಧನೆ ಮಾಡುವ ಕನಸು ಹೊಂದಿರುವ ಯುವಕರ ಆಶೋತ್ತರಗಳನ್ನು ಸರ್ಕಾರದ ತಪ್ಪು ನೀತಿಗಳು ನಾಶ ಮಾಡುತ್ತಿವೆ, ದೇಶದಾದ್ಯಂತ ಯುವಕರು ಪ್ರತಿಭಟನೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕು ನೀಡಿದೆ. ತಮ್ಮ ಹಕ್ಕುಗಳಿಗಾಗಿ ಬೀದಿಗೆ ಬರುವುದು ದೇಶದ್ರೋಹವಲ್ಲ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನವನ್ನು ಉಲ್ಲೇಖಿಸಿದ ಖರ್ಗೆ, ವಿದ್ಯಾರ್ಥಿಗಳ ಮೇಲಿನ ಅನ್ಯಾಯ ಮತ್ತು ದೌರ್ಜನ್ಯಗಳ ಕುರಿತು ಸರ್ಕಾರದಿಂದ ಉತ್ತರ ಕೇಳಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉತ್ತರ ಹೇಳದೆ ತಪ್ಪಿಸಿಕೊಂಡರು ಎಂದು ಟೀಕಿಸಿದ್ದಾರೆ..
ಚುನಾವಣಾ ಆಯೋಗ, ನ್ಯಾಯಾಂಗ, ವಿಶ್ವವಿದ್ಯಾಲಯಗಳು, ತನಿಖಾ ಸಂಸ್ಥೆಗಳು ಮತ್ತು ಮಾಧ್ಯಮಗಳು ಸರ್ಕಾರದ ಪ್ರಭಾವಕ್ಕೆ ಒಳಗಾಗಿವೆ. ಆ ಸಂಸ್ಥೆಗಳಲ್ಲಿ ಆರ್ಎಸ್ಎಸ್ ಸಿದ್ಧಾಂತ ಹೊಂದಿರುವವರನ್ನು ನೇಮಿಸುವ ಪ್ರಯತ್ನ ನಡೆಯುತ್ತಿದೆ ಎಂದೂ ಆರೋಪಿಸಿದ್ದಾರೆ.
ಧಾರ್ಮಿಕ ಕ್ಷೇತ್ರಗಳ ಮೇಲೂ ಪ್ರಶ್ನೆಗಳು ಎದುರಾಗುತ್ತಿವೆ ಎಂದು ಹೇಳಿದ ಅವರು, ರಾಮ ಮಂದಿರದ ದೇಣಿಗೆ ಅಕ್ರಮದ ಆರೋಪಗಳನ್ನೂ ಪ್ರಸ್ತಾಪಿಸಿದರು.

